ADVERTISEMENT

ರಾಮನಾಥಪುರ: ಸಮುದ್ರ ತೀರದಲ್ಲಿ ಪತ್ತೆಯಾಯಿತು ತಿಮಿಂಗಿಲ ಕಳೇಬರ

ಏಜೆನ್ಸೀಸ್
Published 7 ಜೂನ್ 2020, 11:52 IST
Last Updated 7 ಜೂನ್ 2020, 11:52 IST
   

ರಾಮನಾಥಪುರಂ: ತಿಮಿಂಗಲ ಪ್ರಭೇದಕ್ಕೆ ಸೇರಿದ ‘ಸ್ಪರ್ಮ್‌ ವೇಲ್‌’ವೊಂದರ ಕಳೇಬರ ರಾಮನಾಥಪುರಂ ಜಿಲ್ಲೆಯ ಅಲಕಂಕುಳಂ ಬಳಿಯ ಅಟ್ರಂಕಾರೈ ಸಮುದ್ರ ತೀರದಲ್ಲಿ ಭಾನುವಾರ ಪತ್ತೆಯಾಗಿದೆ.

ತಿಮಿಂಗಿಲ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಕಡಲ ಕಿನಾರೆಯಲ್ಲಿಯೇ ಅದನ್ನು ಹೂತಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಜಲಚರದ ಮೇಲ್ದವಡೆ ಹಾಗೂ ಸಣ್ಣ ಕರುಳಿನಲ್ಲಿ,ಔಷಧಿ ತಯಾರಿಸಲು ಬಳಸುವ ತೈಲ ಹಾಗೂ ಮೇಣದಿಂದ ಮಾಡಿದ ಪದಾರ್ಥಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ADVERTISEMENT

‘ಮಾದಕ ವಸ್ತುಗಳನ್ನು ಸಾಗಿಸುವ ಸಲುವಾಗಿ ಈ ಸ್ಲರ್ಮ್‌ ವೇಲ್‌ಗಳನ್ನು ಬಳಸಿರಬಹುದು ಇಲ್ಲವೇ ಆಳ ಸಮುದ್ರದಲ್ಲಿ ಈಜುವಾಗ ಬಂಡೆಗಳಿಗೆ ಡಿಕ್ಕಿಯಾಗಿ ಗಾಯಗೊಂಡಿರಬಹುದು ಎಂದು ಶಂಕಿಸಿರುವ ಅಧಿಕಾರಿಗಳು, ಸಮಗ್ರ ತನಿಖೆಯಿಂದ ಮಾತ್ರ ಈ ಅಪರೂಪದ ಜಲಚರದ ಸಾವಿಗೆ ಕಾರಣ ಪತ್ತೆಯಾಗಲಿದೆ ಎಂದಿದ್ದಾರೆ.

‘ಈ ಜಲಚರಗಳು 18 ಅಡಿ ಉದ್ದ ಇರುತ್ತವೆ, ಇವುಗಳ ತಲೆಭಾಗದಲ್ಲಿರುವ ದ್ರವರೂಪದ ಪದಾರ್ಥ ವೀರ್ಯದಂತೆ ಇರುವ ಕಾರಣ ಇದಕ್ಕೆ ಸ್ಪರ್ಮ್‌ ವೇಲ್‌ ಎಂದು ಕರೆಯಲಾಗುತ್ತದೆ. ಮನ್ನಾರ್‌ ಮತ್ತು ಪಾಕ್‌ ಜಲಸಂಧಿಗಳಲ್ಲಿ ಈ ಪ್ರಭೇದದ ತಿಮಿಂಗಿಲಗಳು ಕಾಣಸಿಗುವುದು ಅಪರೂಪ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ನಾಲ್ಕು ಸ್ಪರ್ಮ್‌ ವೇಲ್‌ ಕಂಡಿವೆ’ ಎಂದು ಅರಣ್ಯಾಧಿಕಾರಿ ಸತೀಶ್‌ ವಿವರಿಸುತ್ತಾರೆ.

‘ಅಪರೂಪದ ಈ ಜಲಚರಗಳನ್ನು ಹಿಡಿಯುವುದು ಅಪರಾಧ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಲಿದ್ದು, ಈ ಅಪರಾಧಕ್ಕೆ 3 ರಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ. ಈ ದೈತ್ಯಮತ್ಸ್ಯಗಳೇನಾದರೂ ಕಂಡರೆ ಮೀನುಗಾರರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದೂ ಸತೀಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.