ADVERTISEMENT

ನೀರ್ಗಲ್ಲು ಕುಸಿತ: ₹1,500 ಕೋಟಿ ನಷ್ಟ

ಪಿಟಿಐ
Published 8 ಫೆಬ್ರುವರಿ 2021, 18:19 IST
Last Updated 8 ಫೆಬ್ರುವರಿ 2021, 18:19 IST
ತಪೋವನ ಸುರಂಗದಲ್ಲಿ ಸೋಮವಾರ ಪರಿಹಾರ ಕಾರ್ಯಾಚರಣೆ ನಡೆಸಲಾಯಿತು
ತಪೋವನ ಸುರಂಗದಲ್ಲಿ ಸೋಮವಾರ ಪರಿಹಾರ ಕಾರ್ಯಾಚರಣೆ ನಡೆಸಲಾಯಿತು   

ಡೆಹ್ರಾಡೂನ್ : ಉತ್ತರಾಖಂಡದಲ್ಲಿನೀರ್ಗಲ್ಲುಕುಸಿತದಿಂದಉಂಟಾದಪ್ರವಾಹದಿಂದ ಎನ್‌ಟಿಪಿಸಿಯ 480 ಮೆಗಾವಾಟ್ ಸಾಮರ್ಥ್ಯದ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ₹1,500 ಕೋಟಿ ನಷ್ಟವಾಗಿದೆ. 2023ರಲ್ಲಿ ಈ ಘಟಕವು ಕಾರ್ಯಾರಂಭ ಮಾಡುವುದೇ ಎಂಬುದು ಪ್ರಶ್ನಾರ್ಥಕವಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಸೋಮವಾರ ಹೇಳಿದ್ದಾರೆ.

ಯೋಜನಾ ಘಟಕಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಲು ಸಚಿವರು ತೋಪವನಕ್ಕೆ ಭೇಟಿ ನೀಡಿದ್ದರು.

‘ಕಾಮಗಾರಿ ಮತ್ತೆ ಶುರುವಾಗುವುದು ಹಾಗೂ ಯೋಜನೆ ಕಾರ್ಯಾರಂಭ ಮಾಡುವುದು ಯಾವಾಗ ಎಂದು ಈಗಲೇ ಹೇಳಲಾಗದು. ಯೋಜನೆಯ ಸ್ಥಳದಲ್ಲಿ ಲಕ್ಷಾಂತರ ಟನ್ ಹೂಳು ಇರುವುದರಿಂದ ಘಟಕ ನಿರ್ವಿುಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ’ ಎಂದು ಹೇಳಿದರು. ಯೋಜನೆಯನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಸಚಿವರು ತಳ್ಳಿಹಾಕಿದರು.

ADVERTISEMENT

ವಿಎಚ್‌ಇಪಿ ಸ್ಥಗಿತ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿವಿಎಲ್) ತನ್ನ ‘ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್’ (ವಿಎಚ್‌ಇಪಿ) ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲಿದೆ.

ಅಲಕಾನಂದಾ ನದಿಯಲ್ಲಿ ಜೆಪಿವಿಎಲ್ ಸಂಸ್ಥೆಯು 400 ಮೆಗಾವಾಟ್ ಸಾಮರ್ಥ್ಯದ ವಿಷ್ಣುಪ್ರಯಾಗ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು.

ರಕ್ಷಣಾ ಕಾರ್ಯಾಚರಣೆ ಚುರುಕು: ಜೋಶಿಮಠದ ಸಮೀಪದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೇನೆ, ಐಟಿಬಿಪಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಪರಿಹಾರ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಾಯುಪಡೆಯೂ ಆಗಮಿಸಿವೆ.

27 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಈ ಪೈಕಿ 12 ಜನರನ್ನು ತಪೋವನ-ವಿಷ್ಣುಗಡ ಯೋಜನಾ ಸ್ಥಳದಲ್ಲಿ ಮತ್ತು 15 ಜನರನ್ನು ರಿಷಿ ಗಂಗಾ ತಾಣದಲ್ಲಿ ರಕ್ಷಿಸಲಾಗಿದೆ.

30-35 ಜನರು ತಪೋವನ-ವಿಷ್ಣುಗಡ ಯೋಜನೆಯ ಸುರಂಗದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಸುರಂಗವು ಸ್ವಲ್ಪ ವಕ್ರವಾಗಿರುವುದರಿಂದ ಪರಿಹಾರ ಕೆಲಸ ಜಟಿಲವಾಗಿದೆ. ಕೊಳೆತಿರುವ ವಸ್ತುಗಳು, ಅವಶೇಷಗಳು ಮತ್ತು ಹೂಳು ತುಂಬಿರುವುದರಿಂದ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

30 ಕಾರ್ಮಿಕರು ಉತ್ತರ ಪ್ರದೇಶದವರು: ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಉತ್ತರ ಪ್ರದೇಶದ ಲಖಿಂಪುರ ಖೇರಿಯ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.