ಪಣಜಿ: ʼಉಲ್ಲಾಸ್ ನವ ಭಾರತʼ ಕಾರ್ಯಕ್ರಮದ ಅಡಿಯಲ್ಲಿ ಗೋವಾ ರಾಜ್ಯವು ಶೇ.100ರಷ್ಟು ಸಾಕ್ಷರತೆ ದಾಖಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಶುಕ್ರವಾರ ಗೋವಾದ 39ನೇ ರಾಜ್ಯೋತ್ಸವ ದಿನಾಚರಣೆ ವೇಳೆ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಶೈಕ್ಷಣಿಕ ರಂಗವನ್ನು ಬಲಗೊಳಿಸುವ ಹೊಸ ಯೋಜನೆಗೆ ನಾವು ಹಾಕಿದ ಪ್ರಯತ್ನವು ಯಶಸ್ವಿಯಾಗಿದೆ ಎಂದರು.
'ರಾಜ್ಯ ಸರ್ಕಾರವು ಗೋವಾದ ಇತಿಹಾಸ ಹಾಗೂ ಪರಶುರಾಮ ನೆಲದ ಧೈರ್ಯ, ಸಂಸ್ಕೃತಿ ಹಾಗೂ ಅಭಿವೃದ್ಧಿಗೆ ಬದ್ಧವಾಗಿದೆ. 1961ರ ಗೋವಾ ವಿಮೋಚನೆ, 1987ರಲ್ಲಿ ರಾಜ್ಯವಾಗಿ ಸ್ಥಾಪನೆಯಾದ ಬಳಿಕ ರಾಜ್ಯವು ಸಾಗಿಬಂದ ದಾರಿಯ ಬಗ್ಗೆ ಹೆಮ್ಮೆಯಿದೆ. ತನ್ನ ನಾಗರಿಕರ ಅಭಿವೃದ್ಧಿಯ ಜೊತೆಗೆ ಸಂತೋಷ ಸೂಚ್ಯಂಕಕ್ಕೂ ಗೋವಾ ಸರ್ಕಾರವು ಪ್ರಾಮುಖ್ಯತೆ ನೀಡಿದೆ ಎಂದು ತಿಳಿಸಿದರು.
ಉಲ್ಲಾಸ್ ನವ ಭಾರತ ಸಾಕ್ಷರತಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ 15 ವರ್ಷ ಮೇಲ್ಪಟ್ಟ ಶಾಲಾ ಶಿಕ್ಷಣ ವಂಚಿತರಿಗೆ ಜೀವನ ಶಿಕ್ಷಣವನ್ನು ಬೋಧಿಸುವುದು ಇದರ ಉದ್ದೇಶವಾಗಿದೆ.
2030ರ ವೇಳೆಗೆ ದೇಶಾದ್ಯಂತ ಶೇ.100ರಷ್ಟು ಸಾಕ್ಷರತೆಯನ್ನು ಸಾಧಿಸುವ ಉದ್ದೇಶದಿಂದ, ಶಾಲಾ ಶಿಕ್ಷಣ ವಂಚಿತರಿಗೆ ಓದಲು, ಬರೆಯಲು ಹಾಗೂ ಗಣಿತವನ್ನು ಬೋಧಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.