ನವದೆಹಲಿ: ಜಿಎಸ್ಟಿ ದರಗಳಲ್ಲಿನ ಕಡಿತವನ್ನು ಗೇಮ್ ಚೇಂಜರ್ ಮತ್ತು ಸ್ವಾತಂತ್ರ್ಯ ನಂತರದ ಅತಿದೊಡ್ಡ ಸುಧಾರಣೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಬಣ್ಣಿಸಿದ್ದಾರೆ.
ಅಲ್ಲದೆ, ಇದರ ಸಂಪೂರ್ಣ ಲಾಭವನ್ನು ಉದ್ಯಮ ಕ್ಷೇತ್ರವು ಗ್ರಾಹಕರಿಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ.
ಜಿಎಸ್ಟಿ ಸುಧಾರಣೆಗಳು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತವೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ ಎಂದು ಸಚಿವರು ಹೇಳಿದ್ದಾರೆ.
ಮೇಡ್ ಇನ್ ಇಂಡಿಯಾವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುವಂತೆ ಅವರು ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಜಿಎಸ್ಟಿಯಲ್ಲಿನ ಕಡಿತವು ಪ್ರತಿಯೊಬ್ಬ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
‘ಕಳೆದ 11 ವರ್ಷಗಳಲ್ಲಿ ಹಲವು ಉಪಕ್ರಮಗಳಿಗೆ ಪೂರಕವಾಗಿ ನಿನ್ನೆ ಘೋಷಣೆಯಾಗಿರುವ ಜಿಎಸ್ಟಿಯ ಪರೋಕ್ಷ ತೆರಿಗೆಗಳಲ್ಲಿನ ಸುಧಾರಣೆಯು ಪರಿವರ್ತನಾಶೀಲ ಸ್ವರೂಪದ್ದಾಗಿದೆ. ಇದು ಔಷಧ ವಲಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ರೈತರಿಂದ ಹಿಡಿದು ನಮ್ಮ ಎಂಎಸ್ಎಂಇಗಳವರೆಗೆ ಹಲವು ವಲಯಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ’ಎಂದು ಅವರು ಹೇಳಿದ್ದಾರೆ.
‘ದೇಶದ ಪ್ರತಿಯೊಬ್ಬ ಪಾಲುದಾರರು, ಪ್ರತಿಯೊಬ್ಬ ಗ್ರಾಹಕರು ಇದರ ಪ್ರಯೋಜನ ಪಡೆಯಲಿದ್ದಾರೆ’ಎಂದು ಗೋಯಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.