ADVERTISEMENT

ಮಹಾಕುಂಭ ಮೇಳ | ಸಂಗಮ ಬಳಿ ಗಂಗೆಯ ನೀರು ಸುರಕ್ಷಿತವಾಗಿಲ್ಲ: CSPCB ಮಾಹಿತಿ

ಪಿಟಿಐ
Published 19 ಫೆಬ್ರುವರಿ 2025, 14:51 IST
Last Updated 19 ಫೆಬ್ರುವರಿ 2025, 14:51 IST
<div class="paragraphs"><p>ಮಹಾಕುಂಭ ಮೇಳ</p></div>

ಮಹಾಕುಂಭ ಮೇಳ

   

ಪಿಟಿಐ

ನವದೆಹಲಿ: ‘ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಬಳಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಪವಿತ್ರ ಸ್ನಾನದಲ್ಲಿ ಭಾಗಿಯಾಗುತ್ತಿರುವುದರಿಂದ, ಇಲ್ಲಿ ಹರಿಯುತ್ತಿರುವ ಗಂಗಾ ನದಿಯ ನೀರು ಶುದ್ಧವಾಗಿಲ್ಲ. ಕರಗಿದ ಆಮ್ಲಜನಕ (ಬಿಒಡಿ) ಪ್ರಮಾಣ ಮಿತಿ ಮೀರಿರುವುದರಿಂದ ಸ್ನಾನಕ್ಕೆ ಯೋಗ್ಯವಾಗಿಲ್ಲ’ ಎಂದು ಸರ್ಕಾರ ಮಾಹಿತಿ ನೀಡಿದೆ.

ADVERTISEMENT

ಜಲಕಾಯಗಳಲ್ಲಿರುವ ಸಾವಯವ ಪದಾರ್ಥಗಳನ್ನು ವಿಭಜಿಸಲು ಸೂಕ್ಷ್ಮಜೀವಿಗಳಿಗೆ ಅಗತ್ಯವಿರುವ ಆಮ್ಲಜನಕ ಪ್ರಮಾಣವೇ ಬಿಒಡಿ. ಸದ್ಯ ಇದರ ಪ್ರಮಾಣ ಅಧಿಕವಾಗಿದೆ. ಬಿಒಡಿ ಮಟ್ಟವು ಪ್ರತಿ ಲೀಟರ್ ನೀರಿಗೆ 3 ಮಿ.ಗ್ರಾಂ. ಒಳಗಿರಬೇಕು. ಹೀಗಿದ್ದಾಗ ಮಾತ್ರ ಆ ನೀರು ಸ್ನಾನಕ್ಕೆ ಯೋಗ್ಯ.

ಆದರೆ ಸಂಗಮದಲ್ಲಿ ಹರಿಯುತ್ತಿರುವ ನೀರು ಅಪಾಯದ ಮಟ್ಟ ಮೀರಿದೆ. ಇಲ್ಲಿ ಫೆ. 16ರಂದು ಬೆಳಿಗ್ಗೆ 5ರ ಹೊತ್ತಿಗೆ ಪ್ರತಿ ಲೀಟರ್‌ಗೆ 5.09 ಮಿ.ಗ್ರಾಂ.ನಷ್ಟಿತ್ತು. ಪೆ. 18ರಂದು 4.6 ಮಿ.ಗ್ರಾಂ. ಮತ್ತು ಫೆ. 19ರ ಬೆಳಿಗ್ಗೆ 8ರ ಹೊತ್ತಿಗೆ ಇದು 5.29 ಮಿ.ಗ್ರಾಂ.ನಷ್ಟು ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಖಲೆಯಲ್ಲಿ ಹೇಳಲಾಗಿದೆ.

ಮಹಾಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಗಂಗಾ ನದಿಯ ಬಿಒಡಿ ಪ್ರಮಾಣ ಜ. 13ರಂದು ಪ್ರತಿ ಲೀಟರ್ ನೀರಿಗೆ 3.94 ಮಿ.ಗ್ರಾಂ.ನಷ್ಟಿತ್ತು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ನೀರಿನ ಗುಣಮಟ್ಟ ಉತ್ತಮವಾಗಿ, 2.28 ಮಿ.ಗ್ರಾಂ.ನಷ್ಟು ದಾಖಲಾಗಿತ್ತು. ಜ. 15ರಂದು ಮತ್ತೆ ಗುಣಮಟ್ಟವು 1 ಮಿ.ಗ್ರಾಂ.ನಷ್ಟು ಕುಸಿಯಿತು. ನಂತರ ಇದು ನಿರಂತರವಾಗಿ ಏರುಮುಖವಾಗಿಯೇ ಸಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದು, ಪ್ರಯಾಗ್‌ರಾಜ್‌ ಬಳಿ ಹರಿಯುವ ನೀರಿನ ಗುಣಮಟ್ಟವು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಫೆ. 3ರಂದು ಹೇಳಿತ್ತು. ಆದರೆ ನದಿಯ ಮೇಲ್ಭಾಗದಿಂದ ಶುದ್ಧ ನೀರನ್ನು ಬಿಟ್ಟಿದ್ದರಿಂದ ನೀರಿನ ಗುಣಮಟ್ಟ ಉತ್ತಮವಾಗಿತ್ತು. ಆದರೆ ಫೆ. 13ರಿಂದ ಮತ್ತೆ ಕುಸಿದಿದೆ. ಇದು ಫೆ. 19ರಂದು ಅಪಾಯದ ಮಟ್ಟ ಮೀರಿದೆ ಎಂದು ಮಂಡಳಿಯು ತನ್ನ ವರದಿಯಲ್ಲಿ ಹೇಳಿದೆ.

‘ಮಹಾಕುಂಭ ಮೇಳವು ಜ. 13ರಿಂದ ಆರಂಭವಾಗಿ ಫೆ. 26ರವರೆಗೂ ನಡೆಯಲಿದೆ. ಇದಕ್ಕಾಗಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ತಾತ್ಕಾಲಿಕ ನಗರ ಮಹಾಕುಂಭ ನಗರದಲ್ಲಿ ಸದ್ಯ 50ಲಕ್ಷದಿಂದ 1 ಕೋಟಿ ಜನರು ಇದ್ದಾರೆ. ತ್ರಿವೇಣಿ ಸಂಗಮದಲ್ಲಿ ಈವರೆಗೂ 54 ಕೋಟಿ ಜನರು ಪವಿತ್ರ ಸ್ನಾನದಲ್ಲಿ ಭಾಗಿಯಾಗಿದ್ಧಾರೆ. ನೀರಿನ ಗುಣಮಟ್ಟ ಕಾಪಾಡಲು ನಿತ್ಯ 10 ಸಾವಿರದಿಂದ 11 ಸಾವಿರ ಕ್ಯುಸೆಕ್‌ ನೀರನ್ನು ಗಂಗೆಗೆ ಹರಿಸಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. 

‘ಬರುವ ಯಾತ್ರಾತ್ರಿಗಳು ಬಳಸುವ ಶೌಚಾಲಯದಿಂದ 1.6 ಕೋಟಿ ಲೀಟರ್ ತ್ಯಾಜ್ಯ ಹಾಗೂ 240 ದಶಲಕ್ಷ ಲೀಟರ್‌ನಷ್ಟು ಅಡುಗೆ, ಸ್ನಾನ ಹಾಗೂ ಬಟ್ಟೆ ಮತ್ತು ಪಾತ್ರೆ ತೊಳೆಯುವ ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿದೆ. 2019ರಲ್ಲಿ ಆಯೋಜಿಸಲಾದ ಅರ್ಧ ಕುಂಭದ ನಂತರ ನದಿ ನೀರಿನ ಗುಣಮಟ್ಟ ಕಾಪಾಡಲು ಸರ್ಕಾರ ಉತ್ತಮ ಕ್ರಮ ಕೈಗೊಂಡಿದ್ದರಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಬಾರಿ ಪಾಲ್ಗೊಂಡಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘2019ಕ್ಕೂ ಪೂರ್ವದಲ್ಲಿ ಇಲ್ಲಿ ಶೌಚಾಲಯಗಳೇ ಇರಲಿಲ್ಲ. ಆ ವರ್ಷ 1.14 ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿತ್ತು. 2024ರ ಮಹಾಕುಂಭ ಮೇಳದಲ್ಲಿ 1.5 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ಶೌಚ ತ್ಯಾಜ್ಯವನ್ನು ಪ್ರತಿ ಮೂರು ದಿನಗಳಿಗೊಮ್ಮೆ ಹೊರತೆಗೆದು, ದೂರದಲ್ಲಿ ಸ್ಥಾಪಿಸಲಾಗಿರುವ ತೆರೆದ ಆಮ್ಲಜನಕ ಸಂಯೋಜಕ ಕೊಳಕ್ಕೆ ಸಾಗಿಸಲಾಗುತ್ತಿದೆ. 200 ಕಿ.ಮೀ. ಉದ್ದದ ತಾತ್ಕಾಲಿಕ ಒಳಚರಂಡಿ ಜಾಲವನ್ನು ನಿರ್ಮಿಸಲಾಗಿದೆ. ಇದನ್ನು ನೇರವಾಗಿ ಶುದ್ಧೀಕರಣ ಘಟಕಕ್ಕೆ ಸಂಪರ್ಕಿಸಲಾಗಿದೆ. ಈ ಹಿಂದಿನ ಕುಂಭ ಮೇಳದಲ್ಲಿ ಪಾಲ್ಗೊಂಡವರಿಗೆ ಈ ಬಾರಿಯ ವ್ಯತ್ಯಾಸ ತಿಳಿಯಲಿದೆ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.