ADVERTISEMENT

ಗಣ್ಯರ ಭದ್ರತೆಯಿಂದ ಎನ್‌ಎಸ್‌ಜಿ ವಾಪಸ್‌ ಪಡೆಯಲು ನಿರ್ಧಾರ

ಪಿಟಿಐ
Published 12 ಜನವರಿ 2020, 13:06 IST
Last Updated 12 ಜನವರಿ 2020, 13:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗಣ್ಯರಿಗೆ ಭದ್ರತೆ ಒದಗಿಸುವ ಕಾರ್ಯದಿಂದ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಕಮಾಂಡೊಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಎರಡು ದಶಕಗಳ ಬಳಿಕ ವಿಐಪಿ ಭದ್ರತಾ ಕಾರ್ಯಗಳಿಂದ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೊಗಳನ್ನು ವಾಪಸ್‌ ಪಡೆಯಲಾಗುತ್ತಿದೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಈ ಕಮಾಂಡೊಗಳು ಜೆಡ್‌ ಪ್ಲಸ್‌ ಶ್ರೇಣಿಯಿಂದ ಹಿಡಿದು ಇತರ 13 ಶ್ರೇಣಿಯ, ಹೆಚ್ಚಿನ ಅಪಾಯವಿರುವ ಗಣ್ಯರಿಗೆ ಭದ್ರತೆ ಒದಗಿಸುತ್ತಿವೆ. ಪ್ರತಿಯೊಬ್ಬ ಗಣ್ಯರ ಭದ್ರತೆಗೂ ಎರಡು ಡಜನ್‌ಗಳಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ADVERTISEMENT

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಇತರ ಗಣ್ಯರ ಭದ್ರತಾ ಕಾರ್ಯವನ್ನು ಎನ್‌ಎಸ್‌ಜಿಯಿಂದ ಅರೆ ಸೇನಾ ಪಡೆಗಳಿಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್‌, ಚಂದ್ರಬಾಬು ನಾಯ್ಡು, ಪ್ರಕಾಶ್‌ ಸಿಂಗ್‌ ಬಾದಲ್‌, ಮತ್ತು ಫಾರೂಕ್‌ ಅಬ್ದುಲ್ಲಾ, ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಎನ್‌ಎಸ್‌ಜಿ ಭದ್ರತೆ ಹೊಂದಿರುವ ಇತರ ಗಣ್ಯರಾಗಿದ್ದಾರೆ.

ಎನ್‌ಎಸ್‌ಜಿ ಕಮಾಂಡೊಗಳು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳಿಗೆ ಮರಳುವ ಅಗತ್ಯವಿದ್ದು, ಇದಕ್ಕಾಗಿ ಗಣ್ಯರ ಭದ್ರತಾ ಕಾರ್ಯಗಳಿಂದ ಅವರನ್ನು ವಾಪಸ್‌ ಪಡೆಯಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ (ವಿಶೇಷ ರಕ್ಷಣಾ ಪಡೆ) ಭದ್ರತೆಯನ್ನು ಈಚೆಗೆ ವಾಪಸ್ ಪಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.