ADVERTISEMENT

ನಕ್ಸಲರ ವಿರುದ್ಧದ ಹೋರಾಟ: ತಾರ್ಕಿಕ ಅಂತ್ಯಕ್ಕೆ ಸರ್ಕಾರ ನಿರ್ಧಾರ -ಅಮಿತ್‌ ಶಾ

ಪಿಟಿಐ
Published 5 ಏಪ್ರಿಲ್ 2021, 10:55 IST
Last Updated 5 ಏಪ್ರಿಲ್ 2021, 10:55 IST
ಅಮಿತ್ ಶಾ
ಅಮಿತ್ ಶಾ   

ರಾಯಪುರ/ನವದೆಹಲಿ: ನಕ್ಸಲರು ಸೃಷ್ಟಿಸಿರುವ ಅಶಾಂತಿ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ತಾರ್ಕಿಕವಾಗಿ ಅಂತ್ಯಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.

ನಕ್ಸಲರೊಂದಿಗೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ 22 ಮಂದಿ ಭದ್ರತಾ ಸಿಬ್ಬಂದಿಗೆ ಅಂತಿಮ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದ ಸಚಿವರು, ಭದ್ರತಾ ಸಿಬ್ಬಂದಿಯ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.

ನಕ್ಸಲರ ವಿರುದ್ಧ ಹೋರಾಡಿ ಹುತಾತ್ಮರಾದ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ಜಗದಾಲ್‌ಪುರದಲ್ಲಿ ಗೌರವ ಸಲ್ಲಿಸಿದ್ದೇನೆ. ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗವನ್ನು ದೇಶ ಎಂದೂ ಮರೆಯುವುದಿಲ್ಲ. ಇಡೀ ದೇಶವೇ ಹುತಾತ್ಮ ಯೋಧರ ಕುಟುಂಬದವರ ಬೆನ್ನಿಗೆ ನಿಲ್ಲುತ್ತದೆ. ನಕ್ಸಲರು ಸೃಷ್ಟಿಸಿರುವ ಅಶಾಂತಿಯ ವಿರುದ್ಧದ ಹೊರಾಟಕ್ಕೆ ಸರ್ಕಾರ ತಾರ್ಕಿಕ ಅಂತ್ಯ ಕಾಣಿಸಲು ನಿರ್ಧರಿಸಿದೆ‘ ಎಂದು ಅಮಿತ್ ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಗೃಹ ಸಚಿವರು ಜಗದಾಲ್‌ಪುರದ ಪೊಲೀಸ್ ಸಂಯೋಜನಾ ಕೇಂದ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಶನಿವಾರದ ಘಟನೆಯ ನಂತರದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಘಟನೆಯಲ್ಲಿ ಗಾಯಗೊಂಡು ರಾಯಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯೋಧರನ್ನು ಭೇಟಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.