ADVERTISEMENT

ರಾಜಕೀಯ ವ್ಯವಹಾರಗಳ ಸಮಿತಿಗೆ ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸೊನೊವಾಲ್‌

ನೂತನ ಸಚಿವರನ್ನೂ ಸಂಪುಟ ಸಮಿತಿ ಸದಸ್ಯರಾಗಿ ನೇಮಕ

ಪಿಟಿಐ
Published 13 ಜುಲೈ 2021, 6:14 IST
Last Updated 13 ಜುಲೈ 2021, 6:14 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಪುನರ್‌ ರಚನೆಯ ನಂತರ, ಕೇಂದ್ರ ಸರ್ಕಾರವು ರಾಜಕೀಯ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳಂತಹ ಪ್ರಮುಖ ಸಂಪುಟ ಸಮಿತಿಗಳನ್ನು ಪುನರ್‌ ರಚನೆ ಮಾಡಿದ್ದು, ಸಂಪುಟಕ್ಕೆ ಸೇರಿರುವ ನೂತನ ಸಚಿವರನ್ನು ಹೊಸ ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಿ ಸೋಮವಾರ ರಾತ್ರಿ ಆದೇಶ ಹೊರಡಿಸಿದೆ.

ಪುನರ್‌ ರಚನೆಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭೂಪೇಂದರ್ ಯಾದವ್ ಮತ್ತು ಸರ್ವಾನಂದ ಸೊನೊವಾಲ್‌ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಕೇಂದ್ರ ಸಚಿವರಾದ ವೀರೇಂದ್ರ ಕುಮಾರ್, ಕಿರಣ್ ರಿಜಿಜು ಮತ್ತು ಅನುರಾಗ್ ಸಿಂಗ್ ಠಾಕೂರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ADVERTISEMENT

ದೇಶದ ಭದ್ರತೆಯ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ರಕ್ಷಣಾ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್‌. ಜೈಶಂಕರ್‌ ಇದ್ದಾರೆ. ದ್ವಿಸದಸ್ಯರನ್ನು ಒಳಗೊಂಡಿರುವ ನೇಮಕಾತಿ ಸಂಪುಟ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಸದಸ್ಯರಾಗಿರುತ್ತಾರೆ.

ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಸಚಿವರಾದ ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಅವರು ಪ್ರಧಾನ ಮಂತ್ರಿ ನೇತೃತ್ವದ ’ಹೂಡಿಕೆ ಮತ್ತು ಬೆಳವಣಿಗೆ’ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಧಾನ ಮಂತ್ರಿ ನೇತೃತ್ವದ ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿಯಲ್ಲಿ ಸಚಿವರಾದ ಅಶ್ವಿನಿ ವೈಷ್ಣವ್‌, ಭೂಪೇಂದ್ರ ಯಾದವ್, ರಾಮಚಂದ್ರ ಪ್ರಸಾದ್ ಸಿಂಗ್‌ ಮತ್ತು ಜಿ. ಕಿಶನ್‌ ರೆಡ್ಡಿ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.