ADVERTISEMENT

ಹೆಲಿಕಾಪ್ಟರ್ ದುರಂತ: ಗ್ರೂ‍ಪ್ ಕ್ಯಾಪ್ಟನ್‌ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ

ಪಿಟಿಐ
Published 15 ಡಿಸೆಂಬರ್ 2021, 6:44 IST
Last Updated 15 ಡಿಸೆಂಬರ್ 2021, 6:44 IST
ಬೆಂಗಳೂರಿನ ಕಮಾಂಡೊ ಆಸ್ಪತ್ರೆ (ಒಳ ಚಿತ್ರದಲ್ಲಿ ಕ್ಯಾಪ್ಟನ್ ವರುಣ್ ಸಿಂಗ್)
ಬೆಂಗಳೂರಿನ ಕಮಾಂಡೊ ಆಸ್ಪತ್ರೆ (ಒಳ ಚಿತ್ರದಲ್ಲಿ ಕ್ಯಾಪ್ಟನ್ ವರುಣ್ ಸಿಂಗ್)   

ನವದೆಹಲಿ: ಹೆಲಿಕಾಪ್ಟರ್‌ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗ್ರೂ‍ಪ್ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೂ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ವರುಣ್ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು.

ಕಳೆದ ಗುರುವಾರ ತಮಿಳುನಾಡಿನ ವೆಲ್ಲಿಂಗ್ಟನ್‌ ಮಿಲಿಟರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವರುಣ್‌ ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಕರೆತರಲಾಗಿದೆ.

ADVERTISEMENT

ಇತ್ತೀಚೆಗೆ ವರುಣ್‌ ಅವರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್‌ನಿಂದ ಕಮಾಂಡೊ ಆಸ್ಪತ್ರೆಗೆ ಚರ್ಮ ರವಾನಿಸಲಾಗಿದೆ.

‘ವರುಣ್‌ ಸಿಂಗ್‌ ಅವರ ದೇಹದಲ್ಲಿ ಅಪಾರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಅವರಿಗೆ ಸಾಕಷ್ಟು ಚರ್ಮದ ಅಗತ್ಯವಿದೆ. ಕಮಾಂಡೊ ಆಸ್ಪತ್ರೆಯವರ ಮನವಿ ಮೇರೆಗೆ 1 ಸಾವಿರ ಚದರ ಸೆಂ.ಮೀ. ಚರ್ಮವನ್ನು ನೀಡಲಾಗಿದೆ. ಇನ್ನಷ್ಟು ಚರ್ಮ ಬೇಕಾದರೆ ಮುಂಬೈ ಮತ್ತು ಚೆನ್ನೈನಲ್ಲಿರುವ ಚರ್ಮ ಬ್ಯಾಂಕ್‌ಗಳಿಂದ ತರಿಸಿ ಕೊಡಲಾಗುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.

ಹೆಲಿಕಾಪ್ಟರ್‌ ಅವಘಡದಲ್ಲಿ ಸಿಡಿಎಸ್‌ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದರು.

ಕಳೆದ ವರ್ಷ ತೇಜಸ್ ಯುದ್ಧ ವಿಮಾನವನ್ನು ಅಪಘಾತದಿಂದ ತಪ್ಪಿಸಿದ್ದಕ್ಕಾಗಿ ಆಗಸ್ಟ್‌ನಲ್ಲಿ ವರುಣ್‌ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.