ADVERTISEMENT

ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ: ಅಮಿತ್ ಶಾ

ಪಿಟಿಐ
Published 16 ನವೆಂಬರ್ 2022, 10:38 IST
Last Updated 16 ನವೆಂಬರ್ 2022, 10:38 IST
ಅಮಿತ್ ಶಾ
ಅಮಿತ್ ಶಾ   

ಅಹಮದಾಬಾದ್: ಗುಜರಾತ್‌ನಲ್ಲಿ ತುಷ್ಟೀಕರಣ ರಾಜಕಾರಣವನ್ನು ತೊಡೆದು ಹಾಕಿರುವ ಬಿಜೆಪಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪರವಾಗಿ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದೆಲ್ಲ ಗುಜರಾತ್‌ನಲ್ಲಿ ಕೋಮುಗಲಭೆ ಸಾಮಾನ್ಯವಾಗಿರುತ್ತಿತ್ತು. 1985ರಿಂದ 1995ರ ನಡುವೆ ಬಿಜೆಪಿಯೇತರ ಸರ್ಕಾರಗಳು ಇದ್ದಾಗ ಕೋಮುಗಲಭೆ ನಡೆಯುತ್ತಿತ್ತು. ವರ್ಷದಲ್ಲಿ 250 ದಿನವೂ ಕರ್ಫ್ಯೂ ಹೇರಿಕೆಯಾಗುತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯಾರೂ ಕೂಡ ಗಲಭೆ ಸೃಷ್ಟಿಸಲು ಧೈರ್ಯ ಮಾಡುತ್ತಿಲ್ಲ. ಇಂದು 20ರ ಹರೆಯದ ಯುವಕರಿಗೆ ಕರ್ಫ್ಯೂ ಏನೆಂಬುದೇ ತಿಳಿದಿಲ್ಲ. ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ತೊಡೆದು ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದೇವೆಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ತೊಡಕು ಸೃಷ್ಟಿಸಿತ್ತು ಎಂದು ಅವರು ಆರೋಪಿಸಿದರು.

ರಾಮಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದಾಗೆಲ್ಲ ಕಾಂಗ್ರೆಸ್ ಹೀಯಾಳಿಸುತ್ತಿತ್ತು. ಆದರೆ ಈಗ ರಾಮಮಂದಿರ ನಿರ್ಮಾಣವಾಗುತ್ತಿದ್ದು, 2024 ಜನವರಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಹೇಳಿದರು.

ರಾಹುಲ್ ಬಾಬಾ ಕೂಡಾ ಮಂದಿರಕ್ಕೆ ಭೇಟಿ ಕೊಡಬಹುದು. 550 ವರ್ಷದಷ್ಟು ಹಳೆಯದಾದ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಶಾಂತಿಯುತವಾಗಿ ಬಗೆಹರಿಸಿದ್ದಾರೆ ಎಂದು ಹೇಳಿದರು.

ಗುಜರಾತ್‌ನಲ್ಲಿ ಡಿಸೆಂಬರ್ 1 ಹಾಗೂ 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿ. 8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.