
ಅಹಮದಾಬಾದ್: ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಕುರಿತು ಸಮೀಕ್ಷೆ ನಡೆಸುವಂತೆ ಶಿಕ್ಷಕರಿಗೆ ಗುಜರಾತ್ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಈ ಆದೇಶ ವಿವಾದಕ್ಕೆ ಕಾರಣವಾಗಿದೆ.
ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಕುರಿತು ತಕ್ಷಣ ಸಮೀಕ್ಷೆ ನಡೆಸಿ, ಮೂರು ದಿನಗಳಲ್ಲಿ ವರದಿ ಕಳುಹಿಸುವಂತೆ ಆಯಾ ಜಿಲ್ಲಾ ಶಿಕ್ಷಣ ಕಚೇರಿಗಳಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕಳೆದ ತಿಂಗಳಿನಲ್ಲಿ ಬಿಹಾರದ ಸ್ಥಳೀಯ ಸಂಸ್ಥೆಯೊಂದು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇದೇ ರೀತಿಯ ದತ್ತಾಂಶ ಸಂಗ್ರಹಿಸಲು ಸೂಚಿಸಲಾಗಿತ್ತು.
ಗಾಂಧಿನಗರದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ ಸುತ್ತೋಲೆಯಲ್ಲಿ, ಇದು ಸುಪ್ರೀಂ ಕೋರ್ಟ್ ವಿಷಯಕ್ಕೆ ಸಂಬಂಧಿಸಿರುವುದರಿಂದ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಲಾಗಿದೆ.
ಗುಜರಾತ್ ಸರ್ಕಾರದ ಅಧಿಸೂಚನೆಯು ವಿವಾದವನ್ನು ಹುಟ್ಟುಹಾಕಿದ್ದು, ಶಿಕ್ಷಕರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಈ ಕ್ರಮದ ವಿರುದ್ಧ ಪ್ರತಿಭಟಿಸಿ, ಶಿಕ್ಷಕರಿಗೆ ಪಠ್ಯೇತರ ಕೆಲಸಗಳಿಂದ ಹೊರೆಯಾಗುತ್ತದೆ ಎಂದು ಹೇಳಿವೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, ರಾಜ್ಯದಲ್ಲಿ ಶಿಕ್ಷಕರಿಗೆ ಆಗಾಗ ಪಠ್ಯೇತರ ಕರ್ತವ್ಯಗಳಿಗೆ ನಿಯೋಜಿಸುವುದರಿಂದ ಬೋಧನೆಯ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ 3,000ಕ್ಕೂ ಹೆಚ್ಚು ಏಕೋಪಾದ್ಯಾಯ ಶಾಲೆಗಳಿವೆ ಎಂದು ಆರೋಪಿಸಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಶಿಕ್ಷಣ ಸಚಿವ ಪ್ರದ್ಯುಮ್ನ ವಾಜ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ಮಾತ್ರ ಸಮೀಕ್ಷೆ ನಡೆಸಬೇಕು. ಬೇರೆ ಸ್ಥಳಗಳಿಗೆ ಭೇಟಿ ನೀಡಿ ಶಿಕ್ಷಕರು ಸಮೀಕ್ಷೆ ನಡೆಸಬೇಕಿಲ್ಲ ಎಂದು ಪ್ರದ್ಯುಮ್ನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.