ADVERTISEMENT

ಪ್ರಧಾನಿ ಸಭೆಯಲ್ಲಿ ಪಾಲ್ಗೊಳ್ಳಲು ಗುಪ್ಕಾರ್‌ ಕೂಟದ ನಿರ್ಧಾರ

ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ನಾಳೆ ಮಾತುಕತೆ

ಪಿಟಿಐ
Published 22 ಜೂನ್ 2021, 20:49 IST
Last Updated 22 ಜೂನ್ 2021, 20:49 IST
ಫಾರೂಕ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ
ಫಾರೂಕ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ   

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಗುರುವಾರ ಕರೆದಿರುವ ಜಮ್ಮು ಕಾಶ್ಮೀರದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಗುಪ್ಕಾರ್‌ ಕೂಟದ ಪಕ್ಷಗಳು ನಿರ್ಧರಿಸಿವೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸುವ ಬಗ್ಗೆ ಚರ್ಚಿಸಲು, ಜಮ್ಮು ಕಾಶ್ಮೀರದ 14 ನಾಯಕರನ್ನು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಆಹ್ವಾನಿಸಲಾಗಿದೆ. 2019ರ ಆಗಸ್ಟ್ 5ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ನಡೆಯಲಿರುವ ಮೊದಲ ಸಭೆ ಇದಾಗಿದೆ. ಪ್ರಧಾನಿ ಅವರ ಆಹ್ವಾನವನ್ನು ಒಪ್ಪಿಕೊಳ್ಳಬೇಕೇ, ಬೇಡವೇ ಎಂದು ಚರ್ಚಿಸಲು ಗುಪ್ಕಾರ್‌ ಒಕ್ಕೂಟದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಮಂಗಳವಾರ ಪ್ರಮುಖ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.

ಇದನ್ನೂ ಓದಿ:ಕಾಶ್ಮೀರ: ವಿಶೇಷ ಸ್ಥಾನ ಮರುಸ್ಥಾಪನೆ ಒತ್ತಾಯಕ್ಕೆ ನಿರ್ಧಾರ

‘ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಮುಂದೆ ಗುಪ್ಕಾರ್‌ ಕೂಟವು ತನ್ನ ನಿಲುವನ್ನು ಮಂಡಿಸಲಿದೆ. ರಾಜ್ಯದ ಕೆಲವು ಪಕ್ಷಗಳ ಮುಖಂಡರಿಗೆ ವೈಯಕ್ತಿಕ ಆಹ್ವಾನ ಇರುವುದರಿಂದ ಅವರೆಲ್ಲರೂ ಪ್ರತ್ಯೇಕವಾಗಿ ತಮ್ಮ ನಿಲುವುಗಳನ್ನು ಮಂಡಿಸುವರು. ಸಭೆಯಲ್ಲಿ ನಾವು ಹೇಳಿದ್ದೇನು, ಅದಕ್ಕೆ ಸರ್ಕಾರದ ಪ್ರತಿಕ್ರಿಯೆ ಏನಾಗಿತ್ತು ಎಂಬುದರ ಮಾಹಿತಿಯನ್ನು ಸಭೆಯ ನಂತರ ನಿಮ್ಮೆಲ್ಲರಿಗೂ ನೀಡುತ್ತೇವೆ’ ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಮುಖ್ಯವಾಹಿನಿಯ ಆರು ಪಕ್ಷಗಳು ಗುಪ್ಕಾರ್‌ ಒಕ್ಕೂಟ ರಚಿಸಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.