ADVERTISEMENT

ಹರಿಯಾಣದಲ್ಲಿ ಕಿಂಗ್‌ ಮೇಕರ್‌ ಆಗುವುದೇ ಜೆಜೆಪಿ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 6:16 IST
Last Updated 24 ಅಕ್ಟೋಬರ್ 2019, 6:16 IST
   

ನವದೆಹಲಿ: ಹರಿಯಾಣದಲ್ಲಿ ಸರ್ಕಾರ ರಚನೆಗೆ ಅಗತ್ಯವಾಗಿರುವ ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ವಿಫಲವಾಗಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆಗಳು ಸಿಕ್ಕಿವೆ. ಭಾರಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವ ಉಮೇದಿನಲ್ಲಿದ್ದ ಬಿಜೆಪಿಗೆ ಇದು ಭಾರಿ ನಿರಾಶೆ ಮೂಡಿಸಿದೆ. ಜತೆಗೆ ಸರ್ಕಾರ ರಚನೆಗೆ ರಾಜಕೀಯ ಮೇಲಾಟಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 46 ಸ್ಥಾನಗಳು ಅಗತ್ಯ. ಆದರೆ, ಸದ್ಯ ಬಿಜೆಪಿ 40 ಸ್ಥಾನಗಳಲ್ಲಷ್ಟೇ ಮುನ್ನಡೆ ಹೊಂದಿದೆ. ಕಾಂಗ್ರೆಸ್‌ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದೆ. ಇದೇ ವೇಳೆ ಜನನಾಯಕ ಜನತಾ ಪಕ್ಷ (ಜೆಜೆಪಿ) 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಕಿಂಗ್‌ ಮೇಕರ್‌ ಆಗುವ ಲಕ್ಷಣಗಳನ್ನು ತೋರಿದೆ.

ಆರಂಭಿಕ ಟ್ರೆಂಡ್‌ ಅತಂತ್ರ ವಿಧಾನಸಭೆ ಸೃಷ್ಟಿಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜೆಜೆಪಿ ಓಲೈಕೆಗೆ ಮುಂದಾಗಿದೆ. ದುಷ್ಯಂತ್‌ ಚೌಟಾಲಾ ಅವರನ್ನು ಕಾಂಗ್ರೆಸ್‌ ಭೇಟಿ ಮಾಡಿದೆ ಎನ್ನಲಾಗಿದೆ.

ADVERTISEMENT

ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದುಷ್ಯಂತ್‌ ಚೌಟಾಲಾ,ಜನತೆ ಬದಲಾವಣೆ ಬಯಸಿದ್ದಾರೆ. ಅದೇ ಗುರಿಯಿಂದಲೇ ಜನ ಮತ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅತಂತ್ರ ವಿಧಾಸಭೆ ಸೃಷ್ಟಿಯಾದರೆ ತಮ್ಮ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಪಕ್ಷದ ಹಿರಿಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ,’ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಜೆಜೆಪಿ ಕಾಂಗ್ರೆಸ್‌ ಜತೆ ಕೈ ಜೋಡಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಕಾಂಗ್ರೆಸ್‌ ನಾಯಕ ದೀಪೇಂದ್ರ ಹೂಡ ಮತ್ತು ಚೌಟಾಲ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.