ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಪಿಟಿಐ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ದಿಢೀರ್ ಪ್ರವಾಹದಿಂದ ಒಬ್ಬರು ಮೃತಪಟ್ಟಿದರೆ, 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಸಂಜೆಯಿಂದ ಮಂಡಿಯಲ್ಲಿ 21.68 ಸೆಂ.ಮೀ ಮಳೆಯಾಗಿದ್ದು, 12 ಜನರು ಕಾಣೆಯಾಗಿದ್ದಾರೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ್ ದೇವಗನ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಸಯಾಂಜ್ನಲ್ಲಿ ಎರಡು ಕುಟುಂಬಗಳಿಗೆ ಸೇರಿದ ಸುಮಾರು ಏಳು ಜನರು ನಾಪತ್ತೆಯಾಗಿದ್ದಾರೆ. ದಿಢೀರ್ ಪ್ರವಾಹಗಳಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ರೈಲು ಸೇರಿದಂತೆ ಸಂಚಾರ ವ್ಯವಸ್ಥೆಯಲ್ಲೂ ಅನಾನುಕೂಲ ಉಂಟಾಗಿದೆ ಎಂದು ದೇವಗನ್ ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮನೆಗಳು ಮತ್ತು ಕೃಷಿ ಭೂಮಿಗೆ ಅಪಾರ ಹಾನಿಯಾಗಿರುವುದರ ಬಗ್ಗೆ ವರದಿಯಾಗಿದ್ದು, ಗ್ರಾಮಗಳಲ್ಲಿ ಸಂಪರ್ಕ ಸೇತುವೆ, ರಸ್ತೆಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಬಿಯಾಸ್ ನದಿಯ ಪಾಂಡೋಹ್ ಅಣೆಕಟ್ಟಿನಿಂದ 1.5 ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರಕ್ಕೆ ಬಿಡಲಾಗಿದೆ.
ಇಂದು ಮಂಡಿ ಮತ್ತು ಹಮೀರ್ಪುರ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಚಂಬಾ, ಹಮೀರ್ಪುರ, ಮಂಡಿ , ಶಿಮ್ಲಾ, ಸಿರ್ಮೌರ್ ಮತ್ತು ಸೋಲನ್ನ ಆರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.