ಶಿಮ್ಲಾ:ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು (ಎಸ್ಪಿ)ಮುಖ್ಯಮಂತ್ರಿ ಬೆಂಗಾವಲು ಪಡೆ ಜೊತೆ ಹೊಡೆದಾಡಿಕೊಂಡ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕುಲ್ಲು ಭೇಟಿಗಾಗಿ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ಭುಂತಾರ್ ವಿಮಾನ ನಿಲ್ದಾಣಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತೆರಳಿದ್ದರು.
ಈ ವೇಳೆ ಕಾರ್ ಇಳಿದು ಬಂದ ಮುಖ್ಯಮಂತ್ರಿ ಬೆಂಗಾವಲು ಪಡೆಯ ಎಎಸ್ಪಿ ಬ್ರಿಜೇಶ್ ಸೂದ್ ಅವರಿಗೆ ಯಾವುದೋ ಕಾರಣಕ್ಕೆ ಕುಲ್ಲು ಎಸ್ಪಿ ಗೌರವ್ ಸಿಂಗ್ ಕಪಾಳಕ್ಕೆ ಹೊಡೆದಿದ್ದಾರೆ.
ಇದರಿಂದ ಕೋಪಗೊಂಡ ಬ್ರಿಜೇಶ್ ಸೇರಿದಂತೆ ಮುಖ್ಯಮಂತ್ರಿ ಬೆಂಗಾವಲು ಪಡೆ ಗೌರವ್ ಅವರಿಗೆ ಒದ್ದು ಹಲ್ಲೆ ಮಾಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಬಂದು ಅಧಿಕಾರಿಗಳನ್ನು ಸಮಾಧಾನ ಪಡಿಸಿದ್ದಾರೆ. ಘಟನೆ ನಡೆಯುವ ವೇಳೆ ಸಿಎಂ ಠಾಕೂರ್ ಕಾರ್ನಲ್ಲಿದ್ದರು ಎನ್ನಲಾಗಿದೆ. ಆದರೆ ಏತಕ್ಕಾಗಿ ಈ ಅಹಿತಕರ ಘಟನೆ ನಡೆಯಿತು ಎಂಬುದು ತಿಳಿದು ಬಂದಿಲ್ಲ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿಮಾಚಲ ಪ್ರದೇಶ ಡಿಜಿಪಿ ಅಸಭ್ಯವಾಗಿ ನಡೆದುಕೊಂಡ ಇಬ್ಬರೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಕಡ್ಡಾಯ ರಜೆ ಮೇಲೆ ತೆರಳಲು ಸೂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆಗೆ ಕೂಡ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.