ADVERTISEMENT

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ

ಪಿಟಿಐ
Published 16 ಜುಲೈ 2021, 3:53 IST
Last Updated 16 ಜುಲೈ 2021, 3:53 IST
ಕುಲ್ಲುವಿನಲ್ಲಿ ಸಂಭವಿಸಿದ ಪ್ರವಾಹ
ಕುಲ್ಲುವಿನಲ್ಲಿ ಸಂಭವಿಸಿದ ಪ್ರವಾಹ   

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ, ಪ್ರವಾಹದಿಂದ 13 ಮಂದಿ ಮೃತರಾಗಿದ್ದಾರೆ. ಈ ಪೈಕಿ 7 ಮಹಿಳೆಯರು ಮತ್ತು 6 ಪುರುಷರು ಸೇರಿದ್ದಾರೆ. ಕಾಣೆಯಾಗಿರುವ ಇನ್ನಿಬ್ಬರ ಸುಳಿವು ಸಿಕ್ಕಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ ಎಂದು ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಪಡೆಯ ನಿರ್ದೇಶಕ ಸುದೇಶ್‌ ಕುಮಾರ್‌ ಮೊಖ್ತಾ ತಿಳಿಸಿದ್ದಾರೆ.

ಕಾಂಗ್ರಾ ಜಿಲ್ಲೆಯೊಂದರಲ್ಲೇ 12 ಮಂದಿ ಮೃತರಾಗಿದ್ದಾರೆ. ಕುಲ್ಲು ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ.

ADVERTISEMENT

ಕಾಂಗ್ರಾ ಜಿಲ್ಲೆಯ ಬೋಹ್‌ ಕಣಿವೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಗ್ರೋಟಾ ಬಾಗ್ವಾನ್ ಹಾಗೂ ಮೆಕ್ಲಿಯೋಡ್‌ ಗಂಜ್‌ ಪ್ರದೇಶದ ಲಿಯುನ್‌ ಖಾಡ್‌ ಮತ್ತು ಬೈಜನಾಥ್‌ ಪ್ರದೇಶದ ಬೈತ್‌ ಖಾಡ್‌ನಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ. ಮೃತರ ದೇಹಗಳು ಸಿಕ್ಕಿವೆ. ನಾಪತ್ತೆಯಾಗಿರುವ ಬೋಹ್‌ ಕಣಿವೆ ಮತ್ತು ಮಂಜ್ಹಿ ಖಾಡ್‌ ಪ್ರದೇಶಕ್ಕೆ ಸೇರಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ ಎಂದು ಸುದೇಶ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.