ಅಗರ್ತಲಾ:ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸುವವರು ಭಾರತವನ್ನು ಪ್ರೀತಿಸುವುದಿಲ್ಲ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.
ಹಿಂದಿ ಭಾಷೆಯೊಂದೇ ದೇಶವನ್ನು ಒಗ್ಗೂಡಿಸುತ್ತದೆ. ಮಹಾತ್ಮಗಾಂಧಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಆಶಯಗಳನ್ನು ಈಡೇರಿಸಬೇಕಿದ್ದರೆ, ದೇಶದ ಜನತೆ ಮಾತೃಭಾಷೆಯ ಜತೆಗೇ ಹಿಂದಿಯನ್ನು ಹೆಚ್ಚಾಗಿ ಬಳಸಬೇಕು ಎಂದು ಅಮಿತ್ ಶಾ ಹೇಳಿದ್ದರು.
ಸೋಮವಾರ ಅಗರ್ತಲಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಬಿಪ್ಲಬ್ ದೇಬ್, ಹಿಂದಿ ರಾಷ್ಟ್ರಭಾಷೆ ಎಂಬುದನ್ನು ವಿರೋಧಿಸುವ ಜನರಿಗೆ ದೇಶದ ಮೇಲೆ ಪ್ರೀತಿ ಇಲ್ಲ. ದೇಶದ ಬಹುತೇಕ ಮಂದಿ ಹಿಂದಿ ಮಾತನಾಡುತ್ತಿರುವುದರಿಂದ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ನಿರ್ಧಾರವನ್ನುನಾನು ಬೆಂಬಲಿಸುತ್ತೇನೆ . ಅದೇ ವೇಳೆ ತಾನು ಇಂಗ್ಲಿಷ್ ವಿರೋಧಿಯೂ ಅಲ್ಲ, ಹಿಂದಿ ಹೇರಿಕೆಯನ್ನೂ ಮಾಡುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಹೇರಿಕೆ ವಿರುದ್ಧ ತಿರುಗಿಬಿದ್ದ ದಕ್ಷಿಣ
200 ವರ್ಷಗಳ ಕಾಲ ಬ್ರಿಟಿಷರು ಭಾರತದಲ್ಲಿ ಅಧಿಕಾರ ನಡೆಸದೇ ಇರುತ್ತಿದ್ದರೆ ದೇಶದಲ್ಲಿ ಇಂಗ್ಲಿಷ್ ಬಳಕೆ ಇರುತ್ತಿರಲಿಲ್ಲ. ಪಾಳೆಯಗಾರರ ಆಡಳಿತಕ್ಕೆ ನಿಷ್ಠಾವಂತರಾಗಿ ಹಲವಾರು ಜನರಿಗೆ ಇಂಗ್ಲಿಷ್ ಪ್ರತಿಷ್ಠೆಯ ಸಂಕೇತವಾಯಿತು. ದೇಶದ ಅಭಿವೃದ್ದಿಗಾಗಿ ಇಂಗ್ಲಿಷ್ನ ಅಗತ್ಯವೇನೂ ಇಲ್ಲ. ಹಾಗೊಂದು ವೇಳೆ ಇರುತ್ತಿದ್ದರೆ ಜರ್ಮನಿ, ಚೀನಾ, ಜಪಾನ್, ರಷ್ಯಾ ಮತ್ತು ಇಸ್ರೇಲ್ ಅಭಿವೃದ್ಧಿ ಹೊಂದುತ್ತಿರಲಿಲ್ಲ.
ಇಂಗ್ಲಿಷ್ನಿರರ್ಗಳವಾಗಿ ಮಾತನಾಡಲು ಬರದೇ ಇದ್ದು, ಪ್ರಾದೇಶೀಕ ಭಾಷೆ ಮಾತನಾಡುವವರಿಗೆ ಸಹಕಾರ ನೀಡಿ ಎಂದು ದೇಬ್ ಸರ್ಕಾರಿ ಅಧಿಕಾರಿಗಳಿಗೆ ಹೇಳಿದ್ದಾರೆ. ಸಹಾಯ ಬೇಡಿಕೊಂಡು ಸರ್ಕಾರಿ ಕಚೇರಿಗಳಿಗೆ ಬರುವಬಂಗಾಳಿ ಅಥವಾ ಕೋಕ್ಬೊರೋಕ್ ಭಾಷೆಯನ್ನು ಮಾತನಾಡುವ ಜನರಿಗೆ ಸಹಾಯ ಮಾಡಲು ಅಧಿಕಾರಿಗಳು ಮನಸ್ಸು ಮಾಡಬೇಕು. ಇಂಗ್ಲಿಷ್ನಲ್ಲಿ ವ್ಯವಹರಿಸುವವರಿಗೆ ಬೇಗನೆ ಕೆಲಸ ಮಾಡಿಕೊಡಲಾಗುತ್ತದೆ. ಈ ರೀತಿ ತಾರತಮ್ಯ ಮಾಡಬಾರದು ಎಂದು ದೇಬ್ ಹೇಳಿದ್ದಾರೆ.
ಇದನ್ನೂ ಓದಿ:ದೇಶದ ಅಸ್ಮಿತೆ, ಭಾಷೆ ಮತ್ತು ಏಕತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.