ನವದೆಹಲಿ: ದೇಶದ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥವಾಗಿ ಕಾಂಗ್ರೆಸ್ ದೇಶದಾದ್ಯಂತ ಶುಕ್ರವಾರ ‘ಜೈ ಹಿಂದ್ ಯಾತ್ರೆ’ ನಡೆಸಿದೆ.
‘ಈ ಯಾತ್ರೆಯು ಪ್ರತಿದಿನ ದೇಶವನ್ನು ಕಾಯುವ ವೀರಯೋಧರ ಧೈರ್ಯ ಮತ್ತು ತ್ಯಾಗಕ್ಕೆ ಸಲ್ಲಿಸುವ ಗೌರವವಾಗಿದೆ. ‘ಜೈ ಹಿಂದ್ ಯಾತ್ರೆ’ ಕೇವಲ ಮೆರವಣಿಗೆಯಲ್ಲ, ಏಕತೆ, ಶಾಂತಿ ಮತ್ತು ನ್ಯಾಯಕ್ಕಾಗಿ ನೀಡುವ ಕರೆಯಾಗಿದೆ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರ ಅವರು ಹೇಳಿದ್ದಾರೆ.
ಪ್ರಸ್ತುತ ಬೆಳವಣಿಗೆಗಳ ಕಾರಣಕ್ಕೆ ‘ಸಂವಿಧಾನ್ ಬಚಾವೋ’ ಆಂದೋಲನವನ್ನು ಮೂಂದೂಡಲಾಗಿದೆ. ದೇಶವೂ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡುವ ಸಲುವಾಗಿ ‘ಜೈ ಹಿಂದ್ ಯಾತ್ರೆ’ಯನ್ನು ನಡೆಸಲಾಗುತ್ತಿದೆ ಎಂದು ಎಂದು ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಅವರು ಹೇಳಿದ್ದಾರೆ
‘ಮಾತು ಮತ್ತು ಕೃತಿಯಲ್ಲಿ ಭಾರತ ಸರ್ಕಾರದ ಜೊತೆಗಿರುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿರಂತರವಾಗಿ ಹೇಳುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಾವು ಪೂರ್ಣ ಸಹಕಾರ ನೀಡುತ್ತೇವೆ’ ಎಂದಿದ್ದಾರೆ..
‘ಸವಾಲೆಸೆದವರಿಗೆ ತಕ್ಕ ಉತ್ತರ ನೀಡಿರುವ ಇತಿಹಾಸವಿದೆ’: ಭಾರತದ ಆತ್ಮಗೌರವಕ್ಕೆ ಸವಾಲೆಸೆದವರಿಗೆ ತಕ್ಕ ಉತ್ತರ ನೀಡಿರುವ ಇತಿಹಾಸವಿದೆ ಎಂದು ಕಾಂಗ್ರೆಸ್ ಶುಕ್ರವಾರ ತಿಳಿಸಿದೆ.
ಮುಗ್ದ ಜನರ ಹತ್ಯೆ ಮಾಡುವ ಮೂಲಕ ಭಯೋತ್ಪಾದಕರು ಭಾರತಕ್ಕೆ ಮತ್ತೊಮ್ಮೆ ಸವಾಲೊಡ್ಡಿದ್ದಾರೆ ಹಾಗೂ ತಾಳ್ಮೆ ಮತ್ತು ಸಂಯಮವನ್ನು ಪರೀಕ್ಷಿಸುತ್ತಿದ್ದಾರೆ. ಇದಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನ ಪ್ರತಿಯೊಬ್ಬ ಕಾರ್ಯಕರ್ತರು ದೇಶದ ಸೈನಿಕರಿಗೆ ಬೆಂಬಲ ನೀಡುತ್ತಾರೆ. ನಮ್ಮ ಸೈನಿಕರ ಬಗ್ಗೆ ನಮಗೆ ಹೆಮ್ಮೆ ಇದೆ. ‘ಜೈ ಹಿಂದ್ ಕಿ ಸೇನಾ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.