ADVERTISEMENT

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸವಾಲು ಎದುರಿಸಲು ಅಹ್ಮದ್ ಪಟೇಲ್ ಪಾಠ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 13:24 IST
Last Updated 24 ನವೆಂಬರ್ 2019, 13:24 IST
   

ಮುಂಬೈ: ಶನಿವಾರ ಬೆಳಗ್ಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಅಧಿಕಾರ ಹಿಡಿದ ಬೆನ್ನಲ್ಲೇ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಆಘಾತಕ್ಕೊಳಗಾಗಿದ್ದವು. ಅದರಂತೆ ಮೂರು ಪಕ್ಷಗಳು ತಮ್ಮ ಶಾಸಕರನ್ನು ಮುಂಬೈನ ಐಷಾರಾಮಿ ಹೋಟೆಲ್‌ಗಳಿಗೆ ಕರೆದೊಯ್ದು ರಕ್ಷಣೆಯಲ್ಲಿ ತೊಡಗಿವೆ.

ಶರದ್ ಪವಾರ್ ಅವರು ತಮ್ಮ ಶಾಸಕರನ್ನು ಮುಂಬೈನ ರಿನಾಯ್‍‌ಸನ್ಸ್ಹೋಟೆಲ್‌ಗೆ ಸ್ಥಳಾಂತರಿಸಿದ್ದರೆ, ಇತ್ತ ಕಾಂಗ್ರೆಸ್ ತಮ್ಮ 44 ಶಾಸಕರನ್ನು ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್‌ನಲ್ಲಿಟ್ಟಿದೆ.

ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿರುವ ವಿಡಿಯೊವೊಂದು ಹರಿದಾಡುತ್ತಿದ್ದು, ಅದರಲ್ಲಿ ಬಿಜೆಪಿ ನೀಡಿರುವ ಸವಾಲನ್ನು ಎದುರಿಸಲು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲರಿಗೂ ತಿಳಿದಿರುವಂತೆ ಕಠಿಣ ಪರಿಶ್ರಮದಿಂದ ನಾವಿಲ್ಲಿಗೆ ತಲುಪಿದ್ದೇವೆ. ನವೆಂಬರ್ 30 ರಂದು ಮತ್ತೆ ನಾವು ಗೆಲುವು ಸಾಧಿಸುತ್ತೇವೆ. ಇದು ಅಗತ್ಯ ಮತ್ತು ನಿಶ್ಚಿತ ಕೂಡ ಎಂದಿದ್ದಾರೆ.

ಈ ಸವಾಲು ಕೇವಲ ಮುಖ್ಯಮಂತ್ರಿಯಿಂದ ಬಂದಿದ್ದಲ್ಲ. ಆದರೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದಿಂದ ಮುಖ್ಯವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಬಂದಿದೆ. ಹಾಗಾಗಿ ಅವರನ್ನು ಸೋಲಿಸುವುದು ಅಗತ್ಯವಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಮತ್ತು ನಮ್ಮ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇತರೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಶಿಂಧೆಮತ್ತು ಕೆ.ಸಿ.ವೇಣುಗೋಪಾಲ್ ಅಹ್ಮದ್ ಪಟೇಲ್ ಅವರ ಪಕ್ಕದಲ್ಲಿ ಕುಳಿತಿರುವ ದೃಶ್ಯವಿದೆ.

ಶಿವಸೇನಾತನ್ನ 56 ಶಾಸಕರ ಪೈಕಿ 55 ಜನರನ್ನು ಮುಂಬೈನ ಅಂಧೇರಿಯ ಲಲಿತ್ ಹೋಟೆಲ್‌ನಲ್ಲಿರಿಸಿದ್ದು, ಶಾಸಕರು ತಮ್ಮ ಮೊಬೈಲ್‌ಗಳನ್ನು ಒಪ್ಪಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.