ಸೋನಮ್ ಮತ್ತು ರಾಜ ರಘುವಂಶಿ
ಇಂದೋರ್(ಮಧ್ಯಪ್ರದೇಶ): ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ಮತ್ತು ಆಕೆಯ ಪೋಷಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹತ್ಯೆಯಾದ ರಾಜ ರಘುವಂಶಿ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಒತ್ತಾಯಿಸಿದ್ದಾರೆ.
ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್, ಮೇ 20ರಂದು ಮೇಘಾಲಯಕ್ಕೆ ಹನಿಮೂನ್ಗೆ ಹೋಗಿದ್ದರು. ಅಲ್ಲಿ ರಘುವಂಶಿ ಅವರ ಹತ್ಯೆ ನಡೆದಿದ್ದು, ಹತ್ಯೆಗೆ ಸಂಚು ನಡೆಸಿದ ಆರೋಪದ ಮೇಲೆ ಸೋನಮ್ ಬಂಧನವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಪಿನ್, ‘ಆರೋಪಿ ಸೋನಮ್, ಆಕೆಯ ಪೋಷಕರು, ಸಹೋದರ ಗೋವಿಂದ ಮತ್ತು ಆತನ ಪತ್ನಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಒಂದರ ಹಿಂದೆ ಒಂದು ಹರಿದಾಡುತ್ತಿವೆ. ಈ ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿರುವವರನ್ನು ಪ್ರಶ್ನಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ನನ್ನ ಸಹೋದರನ ಹತ್ಯೆಯಲ್ಲಿ ಹಲವು ಜನರು ಭಾಗಿಯಾಗಿರುವುದರ ಬಗ್ಗೆ ನಮ್ಮ ಕುಟುಂಬಕ್ಕೆ ಅನುಮಾನವಿದೆ’ ಎಂದೂ ಹೇಳಿದ್ದಾರೆ.
ಏತನ್ಮಧ್ಯೆ, ರಾಜ ರಘುವಂಶಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸೋನಮ್ ಸಹೋದರ ಗೋವಿಂದ ಅವರು ಭಾಗಿಯಾಗಿದ್ದರು. ಆದರೆ, ಗೋವಿಂದ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ರಘುವಂಶಿ ಕುಟುಂಬ ತಿಳಿಸಿದೆ.
‘ಗೋವಿಂದ ಅವರನ್ನು ನಾನು ಮಾತನಾಡಿಸಿಲ್ಲ. ಸಹಾನುಭೂತಿ ತೋರಿಸಲು ಅವರು ಇಲ್ಲಿಗೆ ಬಂದಿರಬಹುದು. ಆದರೆ, ನಾವು ಅವರನ್ನು ಆಹ್ವಾನಿಸಲಿಲ್ಲ’ ಎಂದು ಮತ್ತೊಬ್ಬ ಸಹೋದರ ಸಚಿನ್ ರಘುವಂಶಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.