ADVERTISEMENT

ಹೊಸೂರು ಏರ್ಪೋರ್ಟ್‌ಗೆ ಸ್ಥಳ ಗುರುತು: ತಮಿಳುನಾಡು ಸಿ.ಎಂ. ಸ್ಟಾಲಿನ್‌

ಪಿಟಿಐ
Published 11 ಸೆಪ್ಟೆಂಬರ್ 2025, 15:49 IST
Last Updated 11 ಸೆಪ್ಟೆಂಬರ್ 2025, 15:49 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಹೊಸೂರು: ಡಿಎಂಕೆ ಸರ್ಕಾರದ ಮಹತ್ವಾಕಾಂಕ್ಷೆಯ ಹೊಸೂರು ವಿಮಾನ ನಿಲ್ದಾಣ ಯೋಜನೆಗಾಗಿ ಕೃಷ್ಣಗಿರಿ ಜಿಲ್ಲೆಯಲ್ಲಿನ ಸ್ಥಳವೊಂದನ್ನು ಗುರುತಿಸಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಗುರುವಾರ ಘೋಷಿಸಿದ್ದಾರೆ.

ಅಲ್ಲದೇ, ತಮಿಳುನಾಡು ಕೈಗಾರಿಕಾ ಅಭಿವೃದ್ದಿ ನಿಗಮವು (ಟಿಐಡಿಸಿಒ) ಈಗಾಗಲೇ ಯೋಜನೆಗಾಗಿ ಭೂಮಿಯನ್ನು ಗುರುತಿಸಿ, ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನೂ ಆರಂಭಿಸಿದೆ ಎಂದೂ ತಿಳಿಸಿದ್ದಾರೆ.  

ಇಲ್ಲಿ ನಡೆದ ತಮಿಳುನಾಡು ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಸ್ಟಾಲಿನ್‌ ಭಾಗಿಯಾಗಿದ್ದರು. ಈ ವೇಳೆ ಹೊಸೂರು ವಿಮಾನ ನಿಲ್ದಾಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸ್ಥಳವೊಂದನ್ನು ಗುರುತಿಸಲಾಗಿದೆ ಎಂದಷ್ಟೇ ಹೇಳಿರುವ ಅವರು, ಯಾವ ಪ್ರದೇಶ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

ADVERTISEMENT

ಆದರೆ, ಹೊಸೂರಿನ ಈಶಾನ್ಯ ಭಾಗದಲ್ಲಿರುವ ಬಾಗಲೂರು–ಬೇರಿಗೈ ನಡುವಿನ 2,200 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಎಲ್‌ಎಸ್‌ (ಒಬ್‌ಸ್ಟೆಕಲ್ ಲಿಮಿಟೇಶನ್‌ ಸರ್ಫೇಸ್‌) ಸಮೀಕ್ಷೆಯಲ್ಲೂ ಈ ಪ್ರದೇಶವು ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಸೂಕ್ತವಾಗಿದೆ ಎಂದು ಹೇಳಲಾಗಿತ್ತು ಎನ್ನಲಾಗಿದೆ. 

ಇದಲ್ಲದೇ, ಬಾಗಲೂರು–ಬೇರಿಗೈ ನಡುವಿನ ಪ್ರದೇಶವು ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಹಾಗೂ ತಮಿಳುನಾಡು ವಿಭಾಗದ ಸ್ಯಾಟ್‌ಲೈಟ್‌ ಟೌನ್‌ ರಿಂಗ್ ರಸ್ತೆಗೆ (ಎಸ್‌ಟಿಆರ್‌ಆರ್‌) ಹತ್ತಿರದಲ್ಲಿರುವ ಕಾರಣ ಉಭಯ ರಾಜ್ಯಗಳಿಗೆ ಪ್ರಯೋಜನವಾಗಲಿದೆ ಎನ್ನುವ ಕಾರಣದಿಂದಾಗಿ ಈ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ ಎಂದೂ ಸರ್ಕಾರಿ ಮೂಲಗಳು ತಿಳಿಸಿವೆ.

ತಮಿಳುನಾಡು ಸರ್ಕಾರವು ಬಾಗಲೂರು–ಬೇರಿಗೈ ನಡುವಿನ ಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿದೆ ಎಂಬುದರ ಬಗ್ಗೆ ಆಗಸ್ಟ್‌ 23ರಂದೇ ಡೆಕನ್ ಹೆರಾಲ್ಡ್‌ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.