ADVERTISEMENT

ಒಡಿಶಾ: ಬಿಎಸ್‌ಎಫ್‌ನ ನಕ್ಸಲ್‌ ನಿಗ್ರಹ ಪಡೆಯಿಂದ ಧ್ವಜಾರೋಹಣ

ಪಿಟಿಐ
Published 15 ಆಗಸ್ಟ್ 2021, 11:19 IST
Last Updated 15 ಆಗಸ್ಟ್ 2021, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಲ್ಕನ್‌ಗಿರಿ: ಒಡಿಶಾದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ನೆಲೆಯೊಂದರಲ್ಲಿ ಇದೇ ಮೊದಲ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ವಿಶೇಷ ನಕ್ಸಲ್ ನಿಗ್ರಹ ಕಾರ್ಯಾಚರಣೆ ತಂಡವು ಭಾನುವಾರ ಧ್ವಜಾರೋಹಣ ನೆರವೇರಿಸಿದೆ.

ಒಡಿಶಾ–ಛತ್ತೀಸಗಢ ಗಡಿ ಬಳಿಯ ದಟ್ಟವಾದ ಕಾಡಿನಲ್ಲಿ ಮೊಹುಪದಾರ್‌ ಪ್ರದೇಶದಲ್ಲಿ ಬಿಎಸ್‌ಎಫ್‌ನ ‘ಕಂಪನಿ ಆಪರೇಟಿಂಗ್‌ ಬೇಸ್‌’(ಸಿಒಬಿ) ಅನ್ನು ನಿರ್ಮಿಸಲಾಗಿದೆ. ಇದು ಜಿಲ್ಲಾ ಮುಖ್ಯ ಕಚೇರಿಯಿಂದ 90 ಕಿಲೋ ಮೀಟರ್‌ ದೂರದಲ್ಲಿದೆ. ಇಲ್ಲಿ 160ನೇ ಬಿಎಸ್‌ಎಫ್‌ ಬೆಟಾಲಿಯನ್ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಹಿಡಿತವನ್ನು ವಿಸ್ತರಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಏಕಕಾಲದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಈ ನೆಲೆಯನ್ನು ನಿರ್ಮಿಸಲಾಗಿದೆ.

‘ಈ ನೆಲೆಯಲ್ಲಿ ಇದೇ ಮೊದಲ ಬಾರಿ ಧ್ವಜಾರೋಹಣವನ್ನು ಮಾಡಲಾಗಿದ್ದು, ಬಿಎಸ್‌ಎಫ್‌ ಡಿಐಜಿ ಎಸ್‌.ಕೆ ಸಿಂಗ್‌, 160ನೇ ಬಿಎಸ್‌ಎಫ್‌ ಬೆಟಾಲಿಯನ್‌ ಕಮಾಂಡರ್‌ ತೀರ್ಥ ಆಚಾರ್ಯ, ಗ್ರಾಮದ ಮುಖಂಡರು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಮೊಹುಪದಾರ್‌ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್‌ ಹಿಂಸಾಚಾರಗಳು ನಡೆದಿವೆ. ಶಾಲೆಗಳು ಪಂಚಾಯಿತಿ ಕಟ್ಟಡಗಳನ್ನು ನಾಶಪಡಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಪೊಲೀಸ್‌ ಠಾಣೆಯ ಮೇಲೆಯೂ ದಾಳಿ ನಡೆದಿದೆ. ಭದ್ರತಾ ಪಡೆಗಳ ಮೇಲೆಯೂ ದಾಳಿಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.