ADVERTISEMENT

ಭಾಷೆ ವಿಚಾರದಲ್ಲಿ ಕನಿಮೋಳಿ ಅವರಂತೆ ನನಗೂ ಕಹಿ ಅನುಭವವಾಗಿದೆ‌: ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2020, 3:07 IST
Last Updated 10 ಆಗಸ್ಟ್ 2020, 3:07 IST
ಪಿ. ಚಿದಂಬರಂ
ಪಿ. ಚಿದಂಬರಂ    

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಅವರು ಅನುಭವಿಸಿದ ಅಹಿತಕರ ಅನುಭವ ಅಸಾಮಾನ್ಯವೇನಲ್ಲ. ಇದೇ ರೀತಿಯ ಕಹಿ ಅನುಭವಗಳು ನನಗೂ ಆಗಿವೆ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸೋಮವಾರ ಹೇಳಿದ್ದಾರೆ.

ಹಿಂದಿ ಮಾತನಾಡಲು ಬಾರದು ಎಂಬ ಕಾರಣಕ್ಕೆ ಕನಿಮೋಳಿ ಅವರಿಗೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಅಧಿಕಾರಿಯೊಬ್ಬರು ‘ನೀವು ಭಾರತಿಯರೇ’ ಎಂದು ಕೇಳಿದ ಪ್ರಸಂಗ ಭಾನುವಾರ ದೇಶದಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಇದೇ ಹಿನ್ನೆಲೆಯಲ್ಲಿ ಚಿದಂಬರಂ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕನಿಮೋಳಿ ಅವರು ಅನುಭವಿಸಿದ ಕಹಿ ಅನುಭವವನ್ನು ನಾನೂ ಅನುಭವಿಸಿದ್ದೇನೆ. ಟೆಲಿಫೋನ್ ಸಂಭಾಷಣೆಯ ವೇಳೆ ಮತ್ತು ಕೆಲವೊಮ್ಮೆ ಮುಖಾಮುಖಿಯಾಗಿ ನಾನು ಹಿಂದಿಯಲ್ಲಿ ಮಾತನಾಡಬೇಕೆಂದು ಒತ್ತಾಯಿಸಿದ್ದಸರ್ಕಾರಿ ಅಧಿಕಾರಿಗಳು ಮತ್ತು ಸಾಮಾನ್ಯ ನಾಗರಿಕರಿಂದ ನಾನು ಇದೇ ರೀತಿಯ ಅವಮಾನಗಳನ್ನು ಅನುಭವಿಸಿದ್ದೇನೆ,’ ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

‘ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾರತದ ಅಧಿಕೃತ ಭಾಷೆಗಳೆಂಬುದರತ್ತ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ, ಕೇಂದ್ರ ಸರ್ಕಾರದ ಎಲ್ಲ ನೌಕರರು ಹಿಂದಿ ಮತ್ತು ಇಂಗ್ಲಿಷ್‌ನ ದ್ವಿಭಾಷಿಗಳಾಗಿರಬೇಕು ಎಂದು ಸೂಚಿಸಲಿ,’ ಎಂದು ಅವರು ಆಗ್ರಹಿಸಿದ್ದಾರೆ.

‘ಕೇಂದ್ರ ಸರ್ಕಾರದ ನೌಕರಿಗೆ ಸೇರುವ ಹಿಂದಿಯೇತರ ಉದ್ಯೋಗಿಗಳು ಬೇಗನೆ ಹಿಂದಿ ಕಲಿಯುತ್ತಾರೆ. ಆದರೆ, ಅದೇ ಹುದ್ದೆಗಳಿಗೆ ಸೇರುವ ಹಿಂದಿ ಭಾಷಿಕರು ಇಂಗ್ಲಿಷ್‌ ಅನ್ನು ಮಾತ್ರ ಕಲಿಯುವುದಿಲ್ಲ,’ ಎಂದು ಚಿದಂಬರಂ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.