ADVERTISEMENT

ರೈತರ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ಹೇಳಿಕೆ: ಖಾರವಾಗಿ ಪ್ರತಿಕ್ರಿಯಿಸಿದ ಭಾರತ

ಪಿಟಿಐ
Published 1 ಡಿಸೆಂಬರ್ 2020, 12:44 IST
Last Updated 1 ಡಿಸೆಂಬರ್ 2020, 12:44 IST
ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರು
ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರು   

ನವದೆಹಲಿ: ದೆಹಲಿ ಸಮೀಪ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹಾಗೂ ಕೆಲವು ಮುಖಂಡರು ನೀಡಿರುವ ಹೇಳಿಕೆಗೆ ಮಂಗಳವಾರ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ಈ ವಿಚಾರಗಳು ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ್ದು, ಹೇಳಿಕೆ ನೀಡುವುದು 'ಅನಪೇಕ್ಷಿತ' ಮತ್ತು 'ಅನಗತ್ಯ' ಎಂದು ಹೇಳಿದೆ.

ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾದ ಕೆಲವು ನಾಯಕರು ಅಸಮರ್ಪಕ ಹೇಳಿಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಮುಖ್ಯವಾಗಿ ಪ್ರಜಾಪ್ರಭುತ್ವದ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಂತಹ ಹೇಳಿಕೆಗಳು ಅನಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.

'ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು ರಾಜತಾಂತ್ರಿಕ ವಿಚಾರಗಳನ್ನು ತಪ್ಪಾಗಿ ನಿರೂಪಿಸದಿರುವುದು ಉತ್ತಮ' ಎಂದು ಸಚಿವಾಲಯವು ಕೆನಡಾಗೆ ಸಂದೇಶ ನೀಡಿದೆ.

ADVERTISEMENT

ಟ್ವಿಟರ್ ಖಾತೆಯಲ್ಲಿ ವಿಡಿಯೊ ಲಗತ್ತಿಸಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, 'ರೈತರ ಪ್ರತಿಭಟನೆ ಪರಿಸ್ಥಿತಿ ತುಂಬ ಕಳವಳಕಾರಿಯಾಗಿದೆ. ನಾವೆಲ್ಲರೂ ಅಲ್ಲಿರುವ ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದೇವೆ. ನಿಮ್ಮಲ್ಲಿ ಅನೇಕರಿಗೆ ವಾಸ್ತವದ ಬಗ್ಗೆ ತಿಳಿದಿದೆ ಎಂಬುದು ನನಗೆ ತಿಳಿದಿದೆ. ಆದರೂ ನಾನು ನಿಮಗೆ ನೆನಪಿಸುತ್ತೇನೆ, ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಲು ಕೆನಡಾ ಯಾವಾಗಲೂ ಇರುತ್ತದೆ' ಎಂದು ಹೇಳಿದ್ದಾರೆ.

'ಮಾತುಕತೆಯ ಪ್ರಕ್ರಿಯೆಯನ್ನು ನಾವು ನಂಬುತ್ತೇವೆ ಮತ್ತು ನಮ್ಮ ಕಳವಳವನ್ನು ಮನವರಿಕೆ ಮಾಡಿಕೊಡಲು ಅನೇಕ ವಿಧಾನಗಳ ಮೂಲಕ ನೇರವಾಗಿ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ.' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.