ADVERTISEMENT

ಮೆಟ್ಟಿಲುಬಾವಿಯ ಚಾವಣಿ ಕಾಮಗಾರಿ ಕಳಪೆ: ಕಮಲ್‌ನಾಥ್ ಆರೋಪ

ಇಂದೋರ್‌ ದುರಂತ: ಬಾವಿಯ ಮೇಲಿನ ನಿರ್ಮಾಣ ತೆಗೆದುಹಾಕದಿದ್ದಲ್ಲಿ ಐಪಿಎಲ್ ಹೂಡುವುದಾಗಿ ಎಚ್ಚರಿಕೆ

ಪಿಟಿಐ
Published 1 ಏಪ್ರಿಲ್ 2023, 13:55 IST
Last Updated 1 ಏಪ್ರಿಲ್ 2023, 13:55 IST
ಇಂದೋರ್‌ನ ಬಾವಿ ದುರಂತದಲ್ಲಿ ಸಾವಿಗೀಡಾದವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು –ಪಿಟಿಐ ಚಿತ್ರ 
ಇಂದೋರ್‌ನ ಬಾವಿ ದುರಂತದಲ್ಲಿ ಸಾವಿಗೀಡಾದವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು –ಪಿಟಿಐ ಚಿತ್ರ    

ಇಂದೋರ್: ‘ಇಲ್ಲಿನ ಪಟೇಲ್‌ ನಗರದ ಬೇಲೇಶ್ವರ ಮಹಾದೇವ ಝೂಲೇಲಾಲ್ ದೇವಸ್ಥಾನದ ಪುರಾತನ ಮೆಟ್ಟಿಲುಬಾವಿಯ ಮೇಲೆ ನಿರ್ಮಿಸಿದ್ದ ಚಾವಣಿ ಕಾಮಗಾರಿಯು ಕಳಪೆ ಹಾಗೂ ಅಕ್ರಮದಿಂದ ಕೂಡಿದೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್ ನಾಥ್ ಶನಿವಾರ ಆರೋಪಿಸಿದ್ದಾರೆ.

ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಮಲ್‌ನಾಥ್, ‘ಮೆಟ್ಟಿಲುಬಾವಿಯ ಮೇಲಿ ಅನಧಿಕೃತವಾಗಿ ಚಾವಣಿಯನ್ನು ನಿರ್ಮಿಸಲಾಗಿತ್ತು. ಈ ಕಾಮಗಾರಿಯು ಕಳಪೆಯಿಂದ ಕೂಡಿತ್ತು. ಆಡಳಿತಾರೂಢ ಬಿಜೆಪಿಯ ಒತ್ತಡದಿಂದಾಗಿ ಸ್ಥಳೀಯ ಪಾಲಿಕೆಯು ಈ ನಿರ್ಮಾಣವನ್ನು ಕೆಡವಲಿಲ್ಲ. ಏಳು ದಿನಗಳೊಳಗೆ ಮೆಟ್ಟಿಲು ಬಾವಿಯ ಮೇಲಿನ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸದಿದ್ದರೆ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರವು ರಾಜ್ಯದಲ್ಲಿರುವ ಸಾರ್ವಜನಿಕ ಸ್ಥಳಗಳ ಸುರಕ್ಷಿತೆಗಾಗಿ ಭದ್ರತಾ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಇಂದೋರ್ ಅನ್ನು ಸ್ಮಾರ್ಟ್ ಸಿಟಿ ಎಂದು ಕರೆಯಲಾಗುತ್ತದೆ. ಆದರೆ, ಅಪಘಾತದ ನಂತರ ಮೆಟ್ಟಿಲುಬಾವಿಗೆ ಬಿದ್ದ ಜನರನ್ನು ರಕ್ಷಿಸಲು ಸ್ಥಳೀಯ ಆಡಳಿತದ ಬಳಿ ಅಗತ್ಯ ಉಪಕರಣಗಳಿರಲಿಲ್ಲ. ದುರಂತ ನಡೆದ 12 ಗಂಟೆಗಳ ನಂತರ ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಯಿತು. ಆದರೆ ಅದು ತುಂಬಾ ತಡವಾಗಿತ್ತು’ ಎಂದೂ ಅವರು ದೂರಿದ್ದಾರೆ.

ದುರಂತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಕಮಲ್‌ನಾಥ್ ಅವರ ಆರೋಗ್ಯ ವಿಚಾರಿಸಿದರು. ದುರಂತ ಸಂಭವಿಸಿದ ಬಳಿಕ ದೇವಾಲಯದ ಆಡಳಿತವು ಅಲ್ಲಿನ ಮುಖ್ಯದ್ವಾರವನ್ನು ಬಂದ್ ಮಾಡಿದೆ. ಮೆಟ್ಟಿಲು ಬಾವಿಯ ಮೇಲೆ ಕಬ್ಬಿಣದ ಶೀಟ್‌ಗಳನ್ನು ಹೊದೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.