ADVERTISEMENT

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಭಾರತ ಪಾತ್ರ ವಹಿಸಬಲ್ಲದು: ಇರಾನ್‌ ಸಚಿವ

ಏಜೆನ್ಸೀಸ್
Published 15 ಜನವರಿ 2020, 10:05 IST
Last Updated 15 ಜನವರಿ 2020, 10:05 IST
   

ನವದೆಹಲಿ:‘ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧದ ಭೀತಿನಿವಾರಿಸುವಲ್ಲಿ ಭಾರತ ಪ್ರಧಾನ ಪಾತ್ರ ನಿರ್ವಹಿಸಬಲ್ಲದು,’ ಎಂದು ಇರಾನ್‌ ವಿದೇಶಾಂಗ ಸಚಿವ ಜಾವೇದ್‌ ಜಾರಿಫ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಪ್ರವಾಸದಲ್ಲಿರುವ ಅವರು ಬುಧವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಬಾಲ್‌ ಅವರನ್ನು ಭೇಟಿಯಾಗಿ ಇರಾನ್‌ನ ರಕ್ಷಣಾ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದರು. ನಂತರ ಮಾತನಾಡಿರುವ ಅವರು, ‘ಜಾಗತಿಕವಾಗಿ ಭಾರತ ಬಹುಮುಖ್ಯ ರಾಷ್ಟ್ರ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವ ವಿಚಾರದಲ್ಲಿ ಭಾರತ ದೊಡ್ಡ ಪಾತ್ರ ನಿರ್ವಹಿಸಬಲ್ಲದು,’ ಎಂದು ಅವರು ಹೇಳಿದರು.

ಇರಾನ್‌ ಸೇರಿದಂತೆ ಮಧ್ಯಪ್ರಾಚ್ಯದ ಒಮನ್‌, ಖತಾರ್‌, ಯುಎಇ ರಾಷ್ಟ್ರಗಳೊಂದಿಗೆ ಭಾರತ ಸ್ನೇಹ ಸಂಬಂಧ ಹೊಂದಿದೆ. ಹೀಗಾಗಿ ಭಾರತಕ್ಕೆ ಮಧ್ಯಸ್ಥಿಕೆಯ ಸಾಮರ್ಥ್ಯವೂ ಇರುವ ಹಿನ್ನೆಲೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಇರಾನ್‌ ಸೇನೆಯ ಖುದ್ಸ್‌ ಫೋರ್ಸ್‌ನ ಮುಖ್ಯಸ್ಥ ಖಾಸಿಮ್‌ ಸುಲೇಮಾನಿ ಅವರನ್ನು ಇರಾಕ್‌ನ ಬಾಗ್ದಾದ್‌ನಲ್ಲಿ ಅಮೆರಿಕ ಇತ್ತೀಚೆಗಷ್ಟೇ ಕ್ಷಿಪಣಿ ದಾಳಿಯ ಮೂಲಕ ಹತ್ಯೆ ಮಾಡಿತು. ಇದಕ್ಕೆ ಪ್ರತಿಕಾರವಾಗಿ ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್‌ ರಾಕೆಟ್‌ ದಾಳಿ ನಡೆಸಿದೆ. ಹೀಗಾಗಿ ಮಧ್ಯಪ್ರಾಚ್ಯದದಲ್ಲಿ ಭೀತಿ ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.