ನವದೆಹಲಿ: ಪೂರ್ವ ಲಡಾಖ್ನಲ್ಲಿ ಮೂರೂವರೆ ವರ್ಷಗಳಿಂದ ಉದ್ಭವಿಸಿರುವ ಗಡಿ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉನ್ನತ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ. ಎರಡೂ ದೇಶಗಳ ಸೇನಾ ಅಧಿಕಾರಿಗಳು ಶಾಂತಿ ಕಾಪಾಡಲು ಒಪ್ಪಿದ್ದಾರೆ. ಆದರೆ, ಗಡಿ ವಿವಾದಕ್ಕೆ ಸಂಬಂಧಿಸಿದ ಈ ಮಾತುಕತೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾದ ಸೂಚನೆ ಕಂಡುಬಂದಿಲ್ಲ.
ಚುಶುಲ್-ಮೊಲ್ಡೊ ಗಡಿಯಲ್ಲಿ ಸಂಧಿಸುವ ಸ್ಥಳದಲ್ಲಿ 21ನೇ ಸುತ್ತಿನ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯು ಫೆ. 19 ರಂದು ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.
‘ಸ್ನೇಹ ಮತ್ತು ಸೌಹಾರ್ದದ ವಾತಾವರಣದಲ್ಲಿ ನಡೆದ ಮಾತುಕತೆಯಲ್ಲಿ ಎರಡೂ ಕಡೆಯವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಸೇನಾ ಮತ್ತು ರಾಜತಾಂತ್ರಿಕ ಕಾರ್ಯವಿಧಾನಗಳ ಮೂಲಕ ಮಾತುಕತೆ ಮುಂದುವರಿಸಿಕೊಂಡು ಹೋಗಲು, ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಉಭಯತ್ರರು ಬದ್ಧರಾಗಿದ್ದಾರೆ’ ಎಂದು ಸಚಿವಾಲಯ ಹೇಳಿದೆ.
‘ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ಮರುಸ್ಥಾಪನೆಗೆ ಅಗತ್ಯವಾದ ಪೂರ್ವ ಲಡಾಖ್ನ ಎಲ್ಎಸಿ (ವಾಸ್ತವ ನಿಯಂತ್ರಣ ರೇಖೆ) ಉದ್ದಕ್ಕೂ ಉಳಿದಿರುವ ಪ್ರದೇಶಗಳಲ್ಲಿ ಸೇನೆ ಸಂಪೂರ್ಣ ಹಿಂತೆಗೆದುಕೊಳ್ಳಬೇಕೆಂಬ ಬೇಡಿಕೆ ಬಗ್ಗೆಯೇ ಈ ಹಿಂದಿನ ಮಾತುಕತೆಗಳಲ್ಲೂ ಚರ್ಚೆ ನಡೆಸಲಾಗಿದೆ’ ಎಂದು ಅದು ಹೇಳಿದೆ.
ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿ ಉದ್ಭವಿಸಿರುವ ವಿವಾದಗಳನ್ನು ಬಗೆಹರಿಸುವಂತೆ ಭಾರತ ಬಲವಾಗಿ ಒತ್ತಾಯಿಸಿತು. ಈ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಪ್ರಗತಿ ಕಾಣಿಸಲಿಲ್ಲ ಎಂದು ಮೂಲಗಳು ಹೇಳಿವೆ.
ಕಳೆದ ಅಕ್ಟೋಬರ್ 9 ಮತ್ತು 10 ರಂದು 20ನೇ ಸುತ್ತಿನ ಉಭಯ ದೇಶಗಳ ನಡುವೆ ಸೇನಾ ಮಾತುಕತೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.