ಗೋಧಿ ಕೊಯ್ಲು
ಪಿಟಿಐ ಚಿತ್ರ
ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ಗಡಿ ರಾಜ್ಯಗಳಾದ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ರೈತರು, ಭಾರತ– ಪಾಕಿಸ್ತಾನ ಮಧ್ಯೆ ಉಂಟಾಗಿರುವ ಉದ್ವಿಗ್ನತೆಯ ನಡುವೆ ಬೆಳೆಯ ಕೊಯ್ಲನ್ನು ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮಿರದಲ್ಲಿ ಒಟ್ಟು 3,310 ಕಿ.ಮೀ ಗಡಿ ವ್ಯಾಪಿಸಿದೆ.
ಗಡಿ ಪ್ರದೇಶದಲ್ಲಿನ ಗೋಧಿ ಬೆಳೆಯ ಬಗ್ಗೆ ಪ್ರತ್ಯೇಕ ದತ್ತಾಂಶವಿಲ್ಲ, ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್ನಲ್ಲಿ ಅತಿ ಹೆಚ್ಚು ಗೋಧಿಯನ್ನು ಬೆಳೆಯಲಾಗುತ್ತದೆ. ಈ ಬಾರಿ ಇಳುವರಿ ಉತ್ತಮವಾಗಿದೆ ಎಂದು ಕೃಷಿ ಆಯುಕ್ತ ಪ್ರವೀಣ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಏ.22ರಂದು ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಗಡಿ ರಾಜ್ಯಗಳಲ್ಲಿನ ರೈತರಿಗೆ ಬೆಳೆ ಕೊಯ್ಲಿಗೆ ಸೂಚಿಸಲಾಗಿತ್ತು. ಉಭಯ ದೇಶಗಳ ಸಂಬಂಧ ಹಾಳಾಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಮುಂಚಿತವಾಗಿ ಬೆಳೆಕೊಯ್ಲಿಗೆ ಅಧಿಕಾರಿಗಳು ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಪಂಜಾಬ್, ರಾಜಸ್ಥಾನಗಳಲ್ಲಿ ಏಪ್ರಿಲ್ನಲ್ಲಿ ಗೋಧಿ ಕೊಯ್ಲು ಆರಂಭವಾಗಿ ಮೇ ಅಂತ್ಯದವರೆಗೂ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ಮೇ ಆರಂಭದಲ್ಲೇ ಕೊಯ್ಲು ಪೂರ್ಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.