
ಭಾರತ–ರಷ್ಯಾ ವ್ಯಾಪಾರ ವೇದಿಕೆ ನವದೆಹಲಿಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆಯಲ್ಲಿ ತೊಡಗಿದ್ದರು
ಪಿಟಿಐ ಚಿತ್ರ
ನವದೆಹಲಿ: ‘ಭಾರತಕ್ಕೆ ತಡೆರಹಿತ ಇಂಧನ ಪೂರೈಕೆಯಾಗುವುದನ್ನು ಖಾತ್ರಿಪಡಿಸಲಾಗವುದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಅಭಯ ನೀಡಿದ್ದಾರೆ.
‘ತೈಲ, ಅನಿಲ, ಕಲ್ಲಿದ್ದಲು ಸೇರಿದಂತೆ ಇಂಧನ ಪೂರೈಕೆಗೆ ಸಂಬಂಧಿಸಿ ರಷ್ಯಾ ನಂಬಲರ್ಹ ರಾಷ್ಟ್ರ. ಭಾರತದ ಆರ್ಥಿಕತೆ ಪ್ರಗತಿಗೆ ಈ ಇಂಧನಗಳನ್ನು ತಡೆರಹಿತವಾಗಿ ಪೂರೈಸಲು ರಷ್ಯಾ ಸಿದ್ಧವಿದೆ’ ಎಂದೂ ಪುಟಿನ್ ಹೇಳಿದ್ದಾರೆ.
ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವಂತೆ ಭಾರತವನ್ನು ಮನವೊಲಿಸುವಲ್ಲಿ ತಾನು ಯಶಸ್ವಿಯಾಗಿ ದ್ದಾಗಿ ಅಮೆರಿಕ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಪುಟಿನ್ ಅವರ ಈ ಮಾತಿಗೆ ಮಹತ್ವ ಬಂದಿದೆ.
‘ಸಣ್ಣ ಹಾಗೂ ಅಗತ್ಯಕ್ಕೆ ತಕ್ಕಂತಹ ಗಾತ್ರದ (ಮಾಡುಲರ್) ಪರಮಾಣು ರಿಯಾಕ್ಟರ್ಗಳು ಹಾಗೂ ತೇಲುವ ಅಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಭಾರತಕ್ಕೆ ಸಹಕಾರ ನೀಡಲು ರಷ್ಯಾ ಉತ್ಸುಕವಾಗಿದೆ. ವೈದ್ಯಕೀಯ ಹಾಗೂ ಕೃಷಿಯಂತಹ ಕ್ಷೇತ್ರ ಗಳಲ್ಲಿ ಪರಮಾಣು ತಂತ್ರಜ್ಞಾನ ಬಳಕೆಗೆ ನೆರವು ನೀಡಲೂ ಸಿದ್ಧ’ ಎಂದು ಅವರು ಹೇಳಿದ್ದಾರೆ.
23ನೇ ಭಾರತ–ರಷ್ಯಾ ಶೃಂಗಸಭೆಯಲ್ಲಿ, ಮೋದಿ ಅವರೊಂದಿಗೆ ವ್ಯಾಪಕ ಚರ್ಚೆ ನಡೆಸಿದ ವೇಳೆ ಪುಟಿನ್ ಈ ಭರವಸೆಗಳನ್ನು ನೀಡಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ದೃಢ ಸಂಕಲ್ಪ ಮಾಡಿದ ಉಭಯ ನಾಯಕರು, ಈ ಉದ್ದೇಶ ಸಾಧನೆಗಾಗಿ 5 ವರ್ಷಗಳ ಯೋಜನೆ ಅನುಷ್ಠಾನಕ್ಕೂ ಸಮ್ಮತಿಸಿದರು.
ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವುದು, ತೈಲ ಸಂಸ್ಕರಣೆ, ಪೆಟ್ರೊಕೆಮಿಕಲ್ ತಂತ್ರಜ್ಞಾನ ಗಳು ಹಾಗೂ ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ, ಎಲ್ಎನ್ಜಿ ಮತ್ತು ಪಿಎನ್ಜಿ ಮೂಲಸೌಕರ್ಯ ಹೆಚ್ಚಿಸುವುದು ಸೇರಿದಂತೆ ಹಲವು ಕ್ಷೇತ್ರ ಗಳಲ್ಲಿ ಸಹಕಾರ ವೃದ್ಧಿಸುವ ಬಗ್ಗೆಯೂ ಅವರು ಸಹಮತ ವ್ಯಕ್ತಪಡಿಸಿದ್ದಾರೆ.
ಭದ್ರತೆ, ಆರ್ಥಿಕತೆ, ವ್ಯಾಪಾರ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವುದಕ್ಕೆ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ರಷ್ಯಾ ಮತ್ತು ಭಾರತ ನಿರ್ಧರಿಸಿವೆವ್ಲಾದಿಮಿರ್ ಪುಟಿನ್ ,ರಷ್ಯಾ ಅಧ್ಯಕ್ಷ
ಪುಟಿನ್ ಎರಡೂವರೆ ದಶಕಗಳಿಂದ ಹಲವು ಒಪ್ಪಂದಗಳಿಗೆ ಸ್ಪಂದಿಸಿದ್ದಾರೆ. ಎಂಥದೇ ಪರಿಸ್ಥಿತಿ ಇದ್ದರೂ ಅವರ ನಾಯಕತ್ವದಿಂದಾಗಿ ನಮ್ಮ ಸಂಬಂಧ ಹೊಸ ಎತ್ತರಕ್ಕೇರಿದೆನರೇಂದ್ರ ಮೋದಿ, ಪ್ರಧಾನಿ
‘ಜಾಗತಿಕ ರಾಜಕೀಯದಿಂದಾಗಿ ಎದುರಾಗುವ ಸವಾಲುಗಳ ಹೊರತಾಗಿಯೂ ಉಭಯ ದೇಶಗಳ ನಡುವಿನ ಬಾಂಧವ್ಯ ಧ್ರುವ ತಾರೆಯಂತೆ ಸದಾ ಪ್ರಜ್ವಲಿಸಲಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
ಶೃಂಗಸಭೆ ವೇಳೆ, ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಕುರಿತಾಗಿಯೂ ಉಭಯ ನಾಯಕರು ಚರ್ಚಿಸಿದರು. ‘ಶಾಂತಿಯುತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳುವ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಬೇಕು’ ಎಂಬ ಭಾರತದ ನಿಲುವನ್ನು ಮೋದಿ ಮತ್ತೊಮ್ಮೆ ಪುಟಿನ್ ಅವರಿಗೆ ಸ್ಪಷ್ಟಪಡಿಸಿದರು.
ಪ್ರಮುಖ ಘೋಷಣೆಗಳು
ರಷ್ಯಾ ಪ್ರಜೆಗಳಿಗೆ 30 ದಿನಗಳ ಉಚಿತ ಇ–ಪ್ರವಾಸಿ ವೀಸಾ ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ
ರಷ್ಯಾ ಪ್ರಜೆಗಳಿಗೆ 30 ದಿನಗಳ ‘ಗ್ರೂಪ್ ಟೂರಿಸ್ಟ್’ ವೀಸಾ ಸೌಲಭ್ಯ
ಇಂಧನ ಸುರಕ್ಷತೆ ವಿಚಾರವು ಭಾರತ ಮತ್ತು ರಷ್ಯಾ ಸಂಬಂಧಕ್ಕೆ ಆಧಾರಸ್ತಂಭವಾಗಿದೆ. ಈ ಕ್ಷೇತ್ರದಲ್ಲಿನ ಸಹಕಾರವನ್ನು ನಾವು ಮುಂದುವರಿಸುತ್ತೇವೆ
ಭಯೋತ್ಪಾದನೆ ವಿರುದ್ಧ ಎರಡೂ ದೇಶಗಳು ಒಟ್ಟಾಗಿ ಹೋರಾಟ ನಡೆಸುತ್ತಿವೆ. ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಇರಬಹುದು ಇಲ್ಲವೇ ರಷ್ಯಾದಲ್ಲಿ ಕ್ರಾಕಸ್ ಸಿಟಿ ಹಾಲ್ನಲ್ಲಿ ನಡೆದ ದಾಳಿ ಇರಬಹುದು ಎಲ್ಲವೂ ಭಯೋತ್ಪಾದನೆಯೇ ದಾಳಿಗಳಿಗೆ ಮೂಲ
ಅಂತರರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್(ಐಎನ್ಎಸ್ಟಿಸಿ), ಉತ್ತರ ಸಮುದ್ರ ಮಾರ್ಗ ಹಾಗೂ ಚೆನ್ನೈ–ವ್ಲಾಡಿವೊಸ್ಟಾಕ್ ಕಾರಿಡಾರ್ ವಿಚಾರದಲ್ಲಿ ರಷ್ಯಾದಿಂದ ಮತ್ತಷ್ಟು ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತದೆ
ಧ್ರುವ ಪ್ರದೇಶಗಳ ಕಡಲಯಾನಕ್ಕೆ ಭಾರತೀಯ ನಾವಿಕರನ್ನು ಸಜ್ಜುಗೊಳಿಸುವ ಉದ್ದೇಶವಿದ್ದು, ನಾವಿಕರಿಗೆ ತರಬೇತಿ ನೀಡುವುದಕ್ಕೆ ರಷ್ಯಾದೊಂದಿಗೆ ಭಾರತ ಕೈಜೋಡಿಸಲಿದೆ
ಪ್ರಮುಖ ಅಂಶಗಳು
ಮೋದಿ, ಪುಟಿನ್ ಮಾತುಕತೆಯಲ್ಲಿ ಇಂಧನ, ರಕ್ಷಣಾ ಕ್ಷೇತ್ರ ಹಾಗೂ ವ್ಯಾಪಾರ ಕುರಿತು ಪ್ರಮುಖವಾಗಿ ಚರ್ಚೆ
ಉಕ್ರೇನ್ ಜೊತೆ ಯುದ್ಧ ಆರಂಭಗೊಂಡ ಬಳಿಕ ಪುಟಿನ್ ಅವರು ಭಾರತಕ್ಕೆ ಮೊದಲ ಭೇಟಿ
ಪುಟಿನ್ ಅವರನ್ನು ‘ನನ್ನ ಸ್ನೇಹಿತ’ ಎಂದು ಸಂಬೋಧಿಸಿದ ಮೋದಿ, ಉಭಯ ದೇಶಗಳ ಸ್ನೇಹದ ಗುಣಗಾನ
ರಷ್ಯಾ ಮತ್ತು ಭಾರತದ ಅಧಿಕಾರಿಗಳಿಂದ ವಿವಿಧ ವಿಷಯಗಳ ಕುರಿತು ಏರ್ಪಟ್ಟ ಒಪ್ಪಂದಗಳ ಪ್ರತಿಗಳ ವಿನಿಮಯ
2024–25ನೇ ಸಾಲಿನಲ್ಲಿ ದ್ವಿಪಕ್ಷೀಯ ವ್ಯಾಪಾರ ₹ 6 ಲಕ್ಷ ಕೋಟಿ (68.7 ಶತಕೋಟಿ ಡಾಲರ್). ಆದರೆ, ಭಾರತದ ರಫ್ತು ಪ್ರಮಾಣ ₹ 43 ಸಾವಿರ ಕೋಟಿ
ಪುಟಿನ್ ಎರಡೂವರೆ ದಶಕಗಳಿಂದ ಹಲವು ಒಪ್ಪಂದಗಳಿಗೆ ಸ್ಪಂದಿಸಿದ್ದಾರೆ. ಎಂಥದೇ ಪರಿಸ್ಥಿತಿ ಇದ್ದರೂ ಅವರ ನಾಯಕತ್ವದಿಂದಾಗಿ ನಮ್ಮ ಸಂಬಂಧ ಹೊಸ ಎತ್ತರಕ್ಕೇರಿದೆನರೇಂದ್ರ ಮೋದಿ, ಪ್ರಧಾನಿ
ಭದ್ರತೆ, ಆರ್ಥಿಕತೆ, ವ್ಯಾಪಾರ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವುದಕ್ಕೆ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ರಷ್ಯಾ ಮತ್ತು ಭಾರತ ನಿರ್ಧರಿಸಿವೆವ್ಲಾದಿಮಿರ್ ಪುಟಿನ್ ,ರಷ್ಯಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.