
ರಾಜನಾಥ್ ಸಿಂಗ್
ನವದೆಹಲಿ: ಭಾರತ ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿರಬೇಕು. ಗಡಿಯಲ್ಲಿ ಯಾವಾಗ, ಏನೂ ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಪಾಕಿಸ್ತಾನದೊಂದಿಗಿನ ಸಂಘರ್ಷ ನಿದರ್ಶನವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರ’ದಲ್ಲಿ ಭಾರತವು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದೆ. ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಭವಿಷ್ಯದಲ್ಲಿ ಯೋಜನೆ ರೂಪಿಸಲು ಇದೊಂದು ಅಧ್ಯಯನ ಯೋಗ್ಯ ವಿಚಾರವಾಗಿದೆ’ ಎಂದು ತಿಳಿಸಿದರು.
‘ಆಪರೇಷನ್ ಸಿಂಧೂರ’ದಲ್ಲಿ ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಬಳಕೆಯಿಂದಾಗಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯು ಮತ್ತಷ್ಟು ಹೆಚ್ಚಾಗಿದೆ. ಪ್ರಸ್ತುತ ಜಗತ್ತಿನಲ್ಲಿರುವ ಅನಿಶ್ಚಿತತೆಯಿಂದಾಗಿ ಎಲ್ಲ ಆಯಮಗಳ ಅವಲೋಕನವು ಅತ್ಯಗತ್ಯವಾಗಿದೆ. ಸವಾಲುಗಳನ್ನು ಎದುರಿಸಲು ಸ್ವಾವಲಂಬನೆಯೊಂದೇ ಮಾರ್ಗ’ ಎಂದು ರಾಜನಾಥ್ ಸಿಂಗ್ ಹೇಳಿದರು.
‘ನಮ್ಮ ರಕ್ಷಣಾ ಉತ್ಪಾದನೆಯ ಪ್ರಮಾಣವು 2014ರಲ್ಲಿ ಕೇವಲ ₹46 ಸಾವಿರ ಕೋಟಿಯಷ್ಟಿತ್ತು, ಆದರೆ ಈಗ 1.51 ಲಕ್ಷ ಕೋಟಿಯಷ್ಟಾಗಿದೆ. ಅದರಲ್ಲಿ ಖಾಸಗಿ ವಲಯದ ಕೊಡುಗೆ ₹33 ಸಾವಿರ ಕೋಟಿ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.