ಶೇಖ್ ಹಸೀನಾ
(ಚಿತ್ರ ಕೃಪೆ– ರಾಯಿಟರ್ಸ್ )
ನವದೆಹಲಿ: ಬಾಂಗ್ಲಾದೇಶದ ಪರಿಸ್ಥಿತಿ ಇನ್ನಷ್ಟು ಪ್ರಕ್ಷುಬ್ಧಗೊಳ್ಳುವುದಕ್ಕೆ ಶೇಖ್ ಹಸೀನಾ ನೇತೃತ್ವದ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರವು ಸೂಕ್ಷ್ಮವಾಗಿ ತಿಳಿಸಿದೆ.
ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಜುಲೈ 21ರಂದು ನೀಡಿದ ತೀರ್ಪಿನ ನಂತರದ ‘ತೀರ್ಮಾನಗಳು ಹಾಗೂ ಕ್ರಮಗಳು’ ಪರಿಸ್ಥಿತಿಯನ್ನು ವಿಷಮಗೊಳಿಸಿದವು ಎನ್ನುವ ಮೂಲಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹಸೀನಾ ನೇತೃತ್ವದ ಸರ್ಕಾರವನ್ನು ನಾಜೂಕಾಗಿ ಟೀಕಿಸಿದರು.
‘ಹಿಂಸಾಚಾರ ಹೆಚ್ಚಾಗುತ್ತಿತ್ತು. ಸಾರ್ವಜನಿಕ ಕಟ್ಟಡಗಳ ಮೇಲೆ ಹಾಗೂ ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆದವು. ಜುಲೈ ತಿಂಗಳಾದ್ಯಂತ ಹಿಂಸಾಚಾರ ನಡೆಯಿತು. ತಾಳ್ಮೆಯಿಂದ ವರ್ತಿಸುವಂತೆ, ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ನಾವು ಈ ಅವಧಿಯುದ್ದಕ್ಕೂ ಮತ್ತೆ ಮತ್ತೆ ಕಿವಿಮಾತು ಹೇಳಿದ್ದೆವು. ನಾವು ಸಂಪರ್ಕದಲ್ಲಿದ್ದ ಕೆಲವು ರಾಜಕೀಯ ವೇದಿಕೆಗಳ ಮೂಲಕ ಇದೇ ಬಗೆಯ ಮನವಿಗಳನ್ನು ಮಾಡಿದ್ದೆವು’ ಎಂದು ಜೈಶಂಕರ್ ಅವರು ಸಂಸತ್ತಿಗೆ ತಿಳಿಸಿದ್ದಾರೆ.
ಪ್ರತಿಭಟನಕಾರರನ್ನು ಸೂಕ್ಷ್ಮವಾಗಿ ನಿಭಾಯಿಸುವಂತೆ, ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರವು ಹಸೀನಾ ಅವರಿಗೆ ಸಲಹೆ ನೀಡಿತ್ತು ಎಂಬುದನ್ನು ಜೈಶಂಕರ್ ಅವರ ಮಾತುಗಳು ಬಹಿರಂಗಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.