ADVERTISEMENT

ಗೊಂದಲದಲ್ಲಿರುವ ಕೇಂದ್ರ ಸರ್ಕಾರ, ಕೋವಿಡ್ ನಿರ್ವಹಣೆಯಲ್ಲಿ ವಿಫಲ: ಅಮರ್ತ್ಯ ಸೇನ್

ಪಿಟಿಐ
Published 5 ಜೂನ್ 2021, 5:27 IST
Last Updated 5 ಜೂನ್ 2021, 5:27 IST
ಅಮರ್ತ್ಯ ಸೇನ್‌
ಅಮರ್ತ್ಯ ಸೇನ್‌   

ಮುಂಬೈ: ಕೊರೊನಾ ನಿಯಂತ್ರಣದ ವಿಚಾರದಲ್ಲಿ ಗೊಂದಲದಲ್ಲಿರುವ ಸರ್ಕಾರ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸುವ ಬದಲು, ಇಲ್ಲಿಯವರೆಗೆ ತಾನು ಕೈಗೊಂಡಿರುವ ಕಾರ್ಯಗಳಿಗೆ ಮನ್ನಣೆಗಳಿಸುವತ್ತ ಗಮನ ಹರಿಸಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ ರಾಷ್ಟ್ರೀಯ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‌ಔಷಧ ಉತ್ಪಾದನೆಯಲ್ಲಿ ಉತ್ತಮ ಸ್ಥಾನದಲ್ಲಿರುವುದು ಹಾಗೂ ದೇಶದ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಕೊರೊನಾ ನಿಯಂತ್ರಣ ವಿಚಾರದಲ್ಲಿ ಭಾರತ ಇದ್ದಿದ್ದರಲ್ಲಿ ಉತ್ತಮ ಸ್ಥಾನದಲ್ಲಿದೆ‘ ಎಂದರು.

‘ಕೋವಿಡ್‌ ನಿರ್ವಹಣೆ ಕುರಿತು ಸರ್ಕಾರ ಗೊಂದಲದಲ್ಲಿರುವ ಕಾರಣ, ಭಾರತ ತನ್ನ ಸಾಮರ್ಥ್ಯದ ಮೇಲೆ ಕೋವಿಡ್‌ ಬಿಕ್ಕಟ್ಟನ್ನು ಸಮಪರ್ಕವಾಗಿ ಎದುರಿಸಲು ಸಾಧ್ಯವಿಲ್ಲ’ ಎಂದು ಸೇನ್ ಅಭಿಪ್ರಾಯಪಟ್ಟರು.

ADVERTISEMENT

‘ಸರ್ಕಾರ ದೇಶದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ, ‌ತಾನು ಮಾಡಿರುವ ಕಾರ್ಯಗಳಿಗೆ ಮನ್ನಣೆ ಪಡೆಯುವಲ್ಲಿ ಹೆಚ್ಚು ಉತ್ಸುಕವಾಗಿದೆ. ಪರಿಣಾಮವಾಗಿ, ದೇಶ ಒಂದು ರೀತಿಯ ಮನೋವ್ಯಾಧಿಯಿಂದ (ಸ್ಕಿಜೋಫ್ರೇನಿಯಾ) ಬಳಲುತ್ತಿದೆ’ ಎಂದು ಸೇನ್ ಹೇಳಿದರು.

‌‌ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ದೇಶದಲ್ಲಿ ನಿತ್ಯ 4 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿದೆ. ಅಲ್ಲದೆ ಪ್ರತಿ ದಿನ 4,500ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸೇನ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಕೆಲವು ತಜ್ಞರು, ಕಳೆದ ವರ್ಷ ‘ಕೊರೊನಾವನ್ನು ಗೆದ್ದೆವು‘ ಎಂದು ವಿಯೋತ್ಸವ ಆಚರಿಸಿದ್ದೂ ಎರಡನೇ ಅಲೆಯಲ್ಲಿ ಈ ಪ್ರಮಾಣದ ಸಮಸ್ಯೆ ಎದುರಾಗಲು ಕಾರಣವಾಯಿತು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.