
ಭಾರತೀಯ ನೌಕಾಪಡೆಗಳು
ಪಿಟಿಐ ಚಿತ್ರ
ಮುಂಬೈ: ‘ಆಪರೇಷನ್ ಸಿಂಧೂರ’ದ ವೇಳೆ ಭಾರತೀಯ ನೌಕ ಪಡೆಯು ಆಕ್ರಮಣಕಾರಿ ದಾಳಿ ನಡೆಸುವ ಬೆದರಿಕೆ ಹಾಕಿದ ಕಾರಣ ಪಾಕಿಸ್ತಾನವು ಕದನ ವಿರಾಮ ಒಪ್ಪಲು ಮುಖ್ಯ ಕಾರಣ’ ಎಂದು ಪಶ್ಚಿಮ ಕಮಾಂಡ್ನ ಮುಖ್ಯಸ್ಥ ವೈಸ್ ಆಡ್ಮಿರಲ್ ಕೆ. ಸ್ವಾಮಿನಾಥನ್ ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ಈ ವರ್ಷ ಏಪ್ರಿಲ್ 26ರಂದು 26 ಮಂದಿ ಪ್ರವಾಸಿಗರನ್ನು ಪಾಕಿಸ್ತಾನದ ಭಯೋತ್ಪಾದಕರು ಹತೈಗೈದಿದ್ದರು. ಇದಕ್ಕೆ ಪ್ರತಿಯಾಗಿ ಮೇ ತಿಂಗಳಲ್ಲಿ ಭಾರತವು ಪಾಕಿಸ್ತಾನದ ಉಗ್ರರ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ನೌಕಾಪಡೆಯ ಮುನ್ನಾದಿನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರ ಅವಧಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 30ಕ್ಕೂ ಅಧಿಕ ಹಡಗು ಹಾಗೂ ಜಲಾಂತರ್ಗಾಮಿಗಳನ್ನು ಒಗ್ಗೂಡಿಸಲಾಗಿತ್ತು. ನಮ್ಮ ಮುಂಚೂಣಿಯ ಹಡಗುಗಳು ಮಕ್ರಾನ್ ಕಡಲತೀರದಲ್ಲಿ ಯುದ್ಧಕ್ಕೆ ಅಣಿಯಾಗಿದ್ದವು. ಭಾರತೀಯ ನೌಕಾಪಡೆಯ ಆಕ್ರಮಣಕಾರಿ ನಿಯೋಜನೆ ಹಾಗೂ ಏಪ್ರಿಲ್ನಲ್ಲಿ ಸರಣಿ ಯಶಸ್ವಿ ಶಸ್ತ್ರಾಸ್ತ್ರ ದಾಳಿಗಯಿಂದ ಪಾಕಿಸ್ತಾನದ ನೌಕಾಪಡೆಯು ತನ್ನ ಕಡಲತೀರದಲ್ಲೇ ಬಲವಂತವಾಗಿ ಉಳಿಯುವಂತಾಯಿತು’ ಎಂದು ತಿಳಿಸಿದ್ದಾರೆ.
‘ವಾಸ್ತವವಾಗಿ ಭಾರತೀಯ ನೌಕಾಪಡೆಯಿಂದ ಆಕ್ರಮಣಕಾರಿ ಬೆದರಿಕೆಯಿಂದಲೇ ಪಾಕಿಸ್ತಾನವು ಕದನ ವಿರಾಮ ಪ್ರಸ್ತಾಪಿಸಲು ಮುಖ್ಯ ಕಾರಣವಾಗಿದೆ’ ಎಂದು ಸ್ವಾಮಿನಾಥನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.