ನವದೆಹಲಿ: ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡು ಹಿಡಿಯುವುದಕ್ಕಿಂತ ಮುನ್ನವೇ ಭಾರತೀಯ ಧರ್ಮ ಗ್ರಂಥಗಳಲ್ಲಿ ಗುರುತ್ವಾಕರ್ಷಣೆಯ ಉಲ್ಲೇಖ ಇತ್ತು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ಆರ್ಎಸ್ಎಸ್ ಅಂಗಸಂಸ್ಥೆಯಾದ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಶನಿವಾರ ಆಯೋಜಿಸಿದ್ದ ಗ್ಯಾನೋತ್ಸವ್ ಕಾರ್ಯಕ್ರಮದಲ್ಲಿ ಹೊಸ ಶಿಕ್ಷಣ ನೀತಿ ಬಗ್ಗೆ ಪೊಖ್ರಿಯಾಲ್ ಮಾತನಾಡಿದ್ದಾರೆ.
ಪುರಾತನ ಭಾರತೀಯ ವಿಜ್ಞಾನದ ಬಗ್ಗೆಐಐಟಿ ಮತ್ತು ನ್ಯಾಷನಲ್ ಇನ್ಸಿಟ್ಯೂಟ್ಸ್ ಆಫ್ ಟೆಕ್ನಾಲಜಿ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಚರಕ, ಆರ್ಯಭಟರ ಬಗ್ಗೆ ನಾವು ಮಾತನಾಡುತ್ತಿರಬೇಕು. ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡು ಹಿಡಿಯುವ ಮುನ್ನವೇ ಈ ಬಗ್ಗೆ ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿತ್ತು ಎಂದಿದ್ದಾರೆ ಪೊಖ್ರಿಯಾಲ್.
ಈ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಪತಂಜಲಿ ಸಂಸ್ಥಾಪಕ ಯೋಗ ಗುರು ರಾಮದೇವ್ ಅವರ ಆಪ್ತ ಬಾಲಕೃಷ್ಣ ಮತ್ತು ಇತರ ಆರ್ಎಸ್ಎಸ್ ನಾಯಕರು ಭಾಗಿಯಾಗಿದ್ದರು.
ಐಐಟಿ,ಎನ್ಐಟಿ ಸಂಸ್ಥೆಗಳ ನಿರ್ದೇಶಕರು ಯುಜಿಸಿ ಮತ್ತುಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್ನ ಮುಖ್ಯಸ್ಥರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಮುಂದೆ ಇದೆ ಎಂದು ಹೇಳಿದಾಗ ಅದನ್ನು ಪ್ರಶ್ನಿಸಿದ ಯುವಕನಿಗೆ ಪೊಖ್ರಿಯಾಲ್ ನೀಡಿದ ಉತ್ತರ ಹೀಗಿತ್ತು- "ನಾವು ಯೋಗದ ಬಗ್ಗೆ ಹೇಳಿದಾಗ ಜನರು ತಲೆಬಾಗುತ್ತಾರೆ. ಹಿಂದಿನ ಕಾಲದ ಬಗ್ಗೆ ನಾವು ಯುವಕರಿಗೆ ಹೊಸದಾಗಿ ಹೇಳುವಾಗ ನಾವು ನಮ್ಮ ಪೂರ್ವಜರ ತಿಳುವಳಿಕೆ ಬಗ್ಗೆ ಹೇಳುವುದಿಲ್ಲ.ಹಾಗಾಗಿಯೇ ನಮ್ಮ ಪೂರ್ವಜರ ಜ್ಞಾನ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನುಮಾಡಿ ಎಂದು ನಾನು ಐಐಟಿ ಮತ್ತು ಎನ್ಐಟಿಗಳ ನಿರ್ದೇಶಕರಲ್ಲಿ ಮನವಿ ಮಾಡುತ್ತೇನೆ.
ಅದೇ ರೀತಿ ಕಂಪ್ಯೂಟರ್ ಬಳಕೆಗೆ ಸಂಸ್ಕೃತವು ವೈಜ್ಞಾನಿಕ ಮತ್ತು ಸೂಕ್ತ ಭಾಷೆ ಎಂಬುದನ್ನೂ ಸಾಧಿಸಿ. ವೇದ, ಪುರಾಣಗಳಂತೆ ಸಂಸ್ಕೃತವೂ ಹಳೇ ಭಾಷೆಯಾಗಿದೆ. ಗ್ರಹದಲ್ಲಿರುವ ಎಲ್ಲ ಭಾಷೆಗಳ ತಾಯಿ ಸಂಸ್ಕೃತ. ಇದಕ್ಕಿಂತ ಹಳೆಯ ಭಾಷೆ ಇದೆ ಎಂಬುದು ನಿಮ್ಮ ವಾದವಾದರೆ ಅದು ಯಾವುದು ಎಂದು ನನಗೆ ಹೇಳಿ ಎಂದಿದ್ದಾರೆ ಸಚಿವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.