ADVERTISEMENT

ಸಾಮಾಜಿಕ ಜಾಲತಾಣದ ಮಾಹಿತಿ ಪಿಐಎಲ್‌ಗೆ ಪರಿಗಣಿಸಲು ಆಗುವುದಿಲ್ಲ: ಬಾಂಬೆ ಹೈಕೋರ್ಟ್

ಪಿಟಿಐ
Published 28 ನವೆಂಬರ್ 2023, 11:12 IST
Last Updated 28 ನವೆಂಬರ್ 2023, 11:12 IST
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್   

ಮುಂಬೈ: ಸಾಮಾಜಿಕ ಜಾಲತಾಣಗಳಿಂದ ಸಂಗ್ರಹಿಸಿದ ಮಾಹಿತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆಗೆ ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಮಹಾರಾಷ್ಟ್ರದಲ್ಲಿ ಕಲುಷಿತ ಮೂಲಗಳಿಂದ ನೀರು ಕುಡಿದು ಪ್ರತೀ ವರ್ಷ 1500–1200 ಮಂದಿ ಸಾವಿಗೀಡಾಗುತ್ತಾರೆ ಎಂದು ಹೇಳಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ ಹೀಗೆ ನುಡಿದಿದೆ.

ಜಲಪಾತ ಹಾಗೂ ನೀರಿನ ಮೂಲಗಳನ್ನು ರಕ್ಷಣೆ ಮಾಡಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಜಿತ್‌ ಸಿಂಗ್‌ ಘೋರ್ಪಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರೀಫ್‌ ಡಾಕ್ಟರ್‌ ಅವರಿದ್ದ ವಿಭಾಗೀಯ ಪೀಠ ಹೀಗೆ ನುಡಿದು, ಪಿಐಎಲ್‌ ವಿಚಾರಣೆಗೆ ನಿರಾಕರಿಸಿತು.

ADVERTISEMENT

1500–2000 ಮಂದಿ ಸಾವಿಗೀಡಾಗುತ್ತಿರುವ ಬಗ್ಗೆ ಎಲ್ಲಿಂದ ಮಾಹಿತಿ ಸಿಕ್ಕಿತು ಎಂದು ಕೋರ್ಟ್‌ ‍‍ಪ್ರಶ್ನಿಸಿತು. ಈ ವೇಳೆ ಘೋರ್ಪಡೆಯವರ ಪರ ಹಾಜರಿದ್ದ ವಕೀಲ ಮನೀಂದ್ರೆ ಪಾಂಡೆ, ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಹಾಗೂ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಸಲ್ಲಿಸಿದರು.

ಅರ್ಜಿಯು ಅಸ್ಪಷ್ಟವಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ಹೊಂದಿಲ್ಲ ಎಂದು ಈ ವೇಳೆ ನ್ಯಾಯಾಲಯ ಹೇಳಿತು.

‘ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಪಿಐಎಲ್‌ ವಿಚಾರಣೆಗೆ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಕೆ ವೇಳೆ ನೀವು ಇಷ್ಟೊಂದು ಬೇಜವಾಬ್ದಾರಿ ತೋರಬಾರದು. ನೀವು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ’ ಎಂದು ಮುಖ್ಯನ್ಯಾಯಮೂರ್ತಿ ಉಪಾಧ್ಯಾಯ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.