
ಎಸ್. ಸೋಮನಾಥ್
ಬೆಂಗಳೂರು: 'ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ' ಎಂದು ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಮಂಗಳವಾರ ಹೇಳಿದ್ದಾರೆ.
ವಿಚಾರ ಸಂಕೀರ್ಣದಲ್ಲಿ ಭಾರತದ ಭವಿಷ್ಯದ ತಂತ್ರಜ್ಞಾನಗಳ ಕುರಿತು ಮಾತನಾಡಿರುವ ಅವರು, ಭಾರತಕ್ಕೆ ವಾಪಸ್ ಆಗುತ್ತಿರುವ ಪರಿಣಿತರಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕಿದೆ ಎಂದು ಹೇಳಿದ್ದಾರೆ.
ಭವಿಷ್ಯದ ಹೊಸ ಆವಿಷ್ಕಾರದ ಅಲೆಯನ್ನು ರೂಪಿಸುತ್ತಿರುವ ನವೀನ ತಂತ್ರಜ್ಞಾನಗಳ ಕುರಿತು Fabheads Automation ಸಂಸ್ಥಾಪಕ, ಸಿಇಒ ದಿನೇಶ್ ಕನಕರಾಜ್, ವಿಸಿ ಪಂಡ್ ಆಕ್ಸೆಲ್ನ ಪ್ರಶಾಂತ್ ಪ್ರಕಾಶ್ ಸೇರಿದಂತೆ ಹಲವರು ವಿಚಾರ ಸಂಕೀರ್ಣದಲ್ಲಿ ಮಾತನಾಡಿದ್ದಾರೆ. ಅವರೆಲ್ಲರೂ, ಜಾಗತಿಕ ಮಟ್ಟದಲ್ಲಿರುವ ಭಾರತದ ಪ್ರತಿಭಾವಂತರನ್ನು ಆಕರ್ಷಿಸಲು ದೇಶದಲ್ಲಿ ಚೀನಾ ಮಾದರಿಯಲ್ಲಿ ಉತ್ತಮ ಸಾಂಸ್ಥಿಕ ಸೌಕರ್ಯಗಳನ್ನು ರೂಪಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಹಾಗೆಯೇ, ಇವೆಲ್ಲವೂ ಕೇವಲ ಹಣದಿಂದಷ್ಟೇ ಸಾಧ್ಯವಿಲ್ಲ. ವ್ಯವಸ್ಥೆಯನ್ನೇ ಆ ರೀತಿ ಸಜ್ಜುಗೊಳಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅಸ್ಥಿರತೆಗೆ ಪರ್ಯಾಯವಾಗಿ ದೇಶವನ್ನು ಆತ್ಮನಿರ್ಭರವನ್ನಾಗಿಸಲು ತಂತ್ರಜ್ಞಾನದ ಆಳಕ್ಕಿಳಿದು ಯೋಜನೆ ರೂಪಿಸುವುದು ಅಗತ್ಯವಿದೆ. ಇದಕ್ಕೆ ಪೂರಕವಾಗಿ ದೇಶದಲ್ಲಿರುವ ವಿವಿಧ ವಿಷಯಗಳ ತಂತ್ರಜ್ಞಾನ ಪರಿಣಿತರನ್ನು ಪರಸ್ಪರ ಬೆಸೆಯುವುದು ಮತ್ತು ಅವರ ಪರಿಣತಿಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸೋಮನಾಥ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.