ನವದೆಹಲಿ: ಅದಾನಿ ಸಮೂಹದ ಪ್ರಮುಖ ಹೂಡಿಕೆದಾರ ಸಂಸ್ಥೆಯೊಂದರ ಸಹ ಮಾಲೀಕತ್ವದ ಕಂಪನಿಗೆ ರಕ್ಷಣಾ ಉಪಕರಣಗಳ ಪೂರೈಕೆಯ ಗುತ್ತಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಕೆಲ ವಿರೋಧ ಪಕ್ಷಗಳು ಬುಧವಾರ ಆರೋಪಿಸಿವೆ.
‘ವಿದೇಶಿ ಮೂಲದ ಅಪರಿಚಿತ ಕಂಪನಿಗಳಿಗೆ ರಕ್ಷಣಾ ಕ್ಷೇತ್ರದ ಉಪಕರಣಗಳ ಅಭಿವೃದ್ಧಿ, ಪೂರೈಕೆಯ ಗುತ್ತಿಗೆ ನೀಡುವ ಮೂಲಕ ದೇಶದ ಭದ್ರತೆಯಂತಹ ವಿಷಯದಲ್ಲಿ ಕೇಂದ್ರ ಸರ್ಕಾರ ಏಕೆ ರಾಜಿ ಮಾಡಿಕೊಂಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಪ್ರಶ್ನಿಸಿದ್ದಾರೆ. ಎಲಾರ ಕ್ಯಾಪಿಟಲ್ ಎಂಬ ಸಂಸ್ಥೆಯು ‘ಎಲಾರ ಇಂಡಿಯಾ ಅಪಾರ್ಚುನಿಟೀಸ್ ಫಂಡ್’ (ಎಲಾರ ಐಒಎಫ್) ಎಂಬ ಕಂಪನಿಯನ್ನು ನಿರ್ವಹಣೆ ಮಾಡುತ್ತಿದೆ. ಇದರ ಮೂಲಕ ಈ ಸಂಸ್ಥೆ, ಅದಾನಿ ಸಮೂಹದಲ್ಲಿ ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇದು ಮಾರಿಷಸ್ನಲ್ಲಿ ನೋಂದಣಿ ಮಾಡಿಕೊಂಡಿದೆ.
ಎಲಾರ ಕ್ಯಾಪಿಟಲ್, ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಪ್ರವರ್ತಕ ಕಂಪನಿಯಾಗಿದೆ. ಅದಾನಿ ಸಮೂಹ ಕಂಪನಿ ಕೂಡ ಎಡಿಟಿಪಿಎಲ್ನ ಪ್ರವರ್ತಕ ಕಂಪನಿಗಳಲ್ಲಿ ಒಂದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.