ADVERTISEMENT

ಲಡಾಖ್ | ಎಲ್‌ಎಸಿ ಬಳಿ ಪರಿಸ್ಥಿತಿ ಸೂಕ್ಷ್ಮವಾಗಿಯೇ ಇದೆ: ಜೈಶಂಕರ್

ಪಿಟಿಐ
Published 18 ಮಾರ್ಚ್ 2023, 14:27 IST
Last Updated 18 ಮಾರ್ಚ್ 2023, 14:27 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್‌ಎಸಿ) ಪರಿಸ್ಥಿತಿಯು ಸೂಕ್ಷ್ಮವಾಗಿದ್ದು, ಅಪಾಯಕಾರಿಯಾಗಿಯೇ ಇದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದ್ದಾರೆ.

‘ಎಲ್‌ಎಸಿಯ ಕೆಲ ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿ ಗಮನಾರ್ಹ ಪ್ರಗತಿ ಸಾಧಿಸಲಾಗಿದ್ದರೂ ಈ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಯೋಧರ ನಿಯೋಜನೆ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಗಡಿಯಲ್ಲಿನ ಪರಿಸ್ಥಿತಿ ಸೂಕ್ಷ್ಮ ಹಾಗೂ ಅಪಾಯಕಾರಿ ಎಂಬುದು ಭಾರತೀಯ ಸೇನೆಯ ವಿಶ್ಲೇಷಣೆ’ ಎಂದು ಹೇಳಿದ್ದಾರೆ.

ಅವರು ‘ಇಂಡಿಯಾ ಟುಡೆ ಕಾಂಕ್ಲೇವ್’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು.

ADVERTISEMENT

‘ಗಡಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಪರಿಹರಿಸುವ ಕುರಿತು 2020ರ ಸೆಪ್ಟೆಂಬರ್‌ನಲ್ಲಿ ನಾನು ಮತ್ತು ಆಗ ಚೀನಾ ವಿದೇಶಾಂಗ ಸಚಿವರಾಗಿದ್ದ ವಾಂಗ್‌ ಯಿ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಂಡಿದ್ದೆವು. ಈಗ, ಆ ಒಪ್ಪಂದದಂತೆ ಚೀನಾ ನಡೆದುಕೊಳ್ಳಬೇಕಿದೆ’ ಎಂದು ಜೈಶಂಕರ್‌ ಹೇಳಿದರು.

‘ಪೂರ್ವ ಲಡಾಖ್ ಗಡಿಯಲ್ಲಿನ ಬಿಕ್ಕಟ್ಟು ಬಗೆಹರಿಯದೇ ಉಭಯ ದೇಶಗಳ ನಡುವಿನ ಸಂಬಂಧ ಸಹಜಸ್ಥಿತಿಗೆ ಬರಲು ಸಾಧ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.