ADVERTISEMENT

ವ್ಯವಸ್ಥೆ ನಿಮ್ಮನ್ನು ತುಳಿಯುತ್ತಿದೆ: ದಲಿತ ವಿದ್ಯಾರ್ಥಿಗಳಿಗೆ ರಾಹುಲ್ ಎಚ್ಚರಿಕೆ

ಪಿಟಿಐ
Published 20 ಫೆಬ್ರುವರಿ 2025, 10:54 IST
Last Updated 20 ಫೆಬ್ರುವರಿ 2025, 10:54 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ರಾಯ್‌ಬರೇಲಿ: ‘ಸಂವಿಧಾನ ರಚನೆಯಲ್ಲಿ ದಲಿತರ ಯೋಗದಾನ ಮಹತ್ವದ್ದು. ಆದರೆ ಇಂದು ನಿಮ್ಮನ್ನು ಎಲ್ಲೆಡೆ ತುಳಿಯುವ ವ್ಯವಸ್ಥೆ ಇದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ADVERTISEMENT

ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ದಲಿತ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದ್ದಾರೆ.

‘ದೇಶದ ಪ್ರಮುಖ 500 ಕಂಪನಿಗಳ ಉನ್ನತ ಸ್ಥಾನದಲ್ಲಿ ದಲಿತರಿಗೆ ಎಷ್ಟು ಸ್ಥಾನ ದೊರೆತಿದೆ ಎಂಬುದನ್ನು ಪ್ರಶ್ನಿಸಬೇಕಿದೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯೊಬ್ಬರು, ‘ನಮಗೆ ಸರಿಯಾದ ಸೌಲಭ್ಯಗಳಿಲ್ಲದ ಕಾರಣ ನಾವು ಆ ಹಂತ ತಲುಪಲು ಸಾಧ್ಯವಾಗಿಲ್ಲ’ ಎಂದರು.

ಇದಕ್ಕೆ ಉತ್ತರಿಸಿದ ರಾಹುಲ್, ‘ಡಾ. ಅಂಬೇಡ್ಕರ್ ಅವರಿಗೂ ಅವಕಾಶಗಳು ಇರಲಿಲ್ಲ. ಅವರ ಪರಿಶ್ರಮದ ಹಾದಿಯಲ್ಲಿ ಅವರೊಬ್ಬರೇ ಇದ್ದರು. ಹೀಗಿದ್ದರೂ ಈ ದೇಶದ ರಾಜಕೀಯವನ್ನು ಅಲುಗಾಡಿಸಿದರು’ ಎಂದರು.

‘ಇಡೀ ವ್ಯವಸ್ಥೆಯೇ ನಿಮ್ಮ ವಿರುದ್ಧವಿದೆ. ನಿಮ್ಮ ಬೆಳವಣಿಗೆ ಈ ವ್ಯವಸ್ಥೆಗೆ ಬೇಕಾಗಿಲ್ಲ. ಪ್ರತಿನಿತ್ಯ ಈ ವ್ಯವಸ್ಥೆ ನಿಮ್ಮ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಆ ದಾಳಿ ನಿಮ್ಮ ಮೇಲೆ ಹೇಗೆ ನಡೆಯಿತು ಎಂಬುದನ್ನು ತಿಳಿಯಲು ನಿಮಗೆ ಬಹುಕಾಲ ಬೇಕಾಗಬಹುದು’ ಎಂದು ರಾಹುಲ್ ಹೇಳಿದ್ದಾರೆ.

‘ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎನ್ನುವುದನ್ನು ನೀವು ಮೊದಲ ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರೇ ಇರದಿದ್ದರೆ ಇಂಥ ಬಲಿಷ್ಠ ಸಂವಿಧಾನ ರಚನೆಯೂ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ದೃಢವಾಗಿ ಹೇಳಬಲ್ಲೆ. ಹೀಗಾಗಿ ಇದು ನಿಮ್ಮ ಸಿದ್ಧಾಂತ, ನಿಮ್ಮ ಸಂವಿಧಾನ. ಹೀಗಿದ್ದರೂ ನಿಮ್ಮನ್ನು ನಿತ್ಯ ತುಳಿಯವ ವ್ಯವಸ್ಥೆ ಇರುವುದೇ ವಿಪರ್ಯಾಸ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.