ADVERTISEMENT

ಮೋದಿ ವಿರುದ್ಧ ಬಿಲಾವಲ್ ಭುಟ್ಟೊ ಹೇಳಿಕೆ ಖಂಡಿಸಿ ದೇಶದ ಹಲವೆಡೆ ಬಿಜೆಪಿ ಪ್ರತಿಭಟನೆ

ಪಿಟಿಐ
Published 17 ಡಿಸೆಂಬರ್ 2022, 11:30 IST
Last Updated 17 ಡಿಸೆಂಬರ್ 2022, 11:30 IST
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ನೀಡಿದ ಹೇಳಿಕೆಯನ್ನು ಖಂಡಿಸಿ ಉತ್ತರ ಪ್ರದೇಶದ ಲಖನೌನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ನೀಡಿದ ಹೇಳಿಕೆಯನ್ನು ಖಂಡಿಸಿ ಉತ್ತರ ಪ್ರದೇಶದ ಲಖನೌನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ವಿರುದ್ಧ ದೇಶದ ಬಿಜೆಪಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆಗಳು ನಡೆದವು. ಭುಟ್ಟೊ ಅವರ ಪ್ರತಿಕೃತಿ ದಹಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಭುಟ್ಟೊ ಹೇಳಿಕೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕವು ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿತು. ‘ಭಟ್ಟೊ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಮಹಾರಾಷ್ಟ್ರದ ಪುಣೆಯಲ್ಲೂ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಪಾಕಿಸ್ತಾನದ ಧ್ವಜವನ್ನು ದಹಿಸಿ, ಪಾಕ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ತಿಲಕ್‌ ಚೌಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಭಾವಂಕುಲೆ, ಪಕ್ಷದ ಹಲವು ಶಾಸಕರು, ಬಿಜೆಪಿಯ ಮಹಿಳಾ ಘಟಕ ಮತ್ತು ಇತರ ನಾಯಕರು ಪಾಲ್ಗೊಂಡಿದ್ದರು.

‘ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದ ಪಾಕಿಸ್ತಾನ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಯನ್ನು ಸಹಿಸಲಾಗದು’ ಎಂದು ಭಾವಂಕುಲೆ ಹೇಳಿದರು.

ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಕ್‌ ವಿದೇಶಾಂಗ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.

ಸೂಫಿ ಸಮಿತಿ ಖಂಡನೆ:

ಬಿಲಾವಲ್‌ ಭುಟ್ಟೊ ಅವರ ಹೇಳಿಕೆಯನ್ನು ಅಖಿಲ ಭಾರತ ಸೂಫಿ ಸಜ್ಜದನಾಶಿನ್‌ ಸಮಿತಿಯ ಮುಖ್ಯಸ್ಥ ನಾಸಿರುದ್ದಿನ್‌ ಚಿಸ್ತಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

‘ಪ್ರಧಾನಿ ಮೋದಿ ಅವರ ಬಗ್ಗೆ ಭುಟ್ಟೊ ಬಳಸಿರುವ ಭಾಷೆಯಿಂದಾಗಿ ಅವರ ಹುದ್ದೆಯಷ್ಟೇ ಅಲ್ಲದೆ ಇಡೀ ಪಾಕಿಸ್ತಾನದ ಸ್ಥಾನಮಾನವೇ ಕೆಳಮಟ್ಟಕ್ಕೆ ಕುಸಿದಂತಾಗಿದೆ’ ಎಂದು ಹೇಳಿದ್ದಾರೆ.

‘ನಮ್ಮ ತಾಯಿನಾಡಿನ ಪ್ರಧಾನಿಯ ಬಗ್ಗೆ ಪಾಕ್‌ ವಿದೇಶಾಂಗ ಸಚಿವರು ತುಚ್ಛವಾಗಿ ಮಾತನಾಡಿರುವುದನ್ನು ಬಲವಾಗಿ ಖಂಡಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

‘ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತ‌ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ. ಭಾರತದ ಸಂವಿಧಾನವೇ ನಮಗೆಲ್ಲ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿ ಪಡಿಸಿದೆ. ಹೀಗಿರುವಾಗ ಭುಟ್ಟೊ ಅವರು ಭಾರತವನ್ನು ತಮ್ಮ ಅಸ್ಥಿರ ಸರ್ಕಾರದ ಜತೆ ಹೋಲಿಸಿ ನೋಡಬಾರದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.