ADVERTISEMENT

ಹಿಮಾಚಲ ಪ್ರದೇಶ ರಾಜಕೀಯದಲ್ಲಿ ಏನಾದರೂ ಆಗಬಹುದು, ಕಾರ್ಯಕರ್ತರು ಸಜ್ಜಾಗಿರಿ: BJP

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:23 IST
Last Updated 3 ಮಾರ್ಚ್ 2024, 14:23 IST
ಜೈರಾಮ್‌ ಠಾಕೂರ್
ಜೈರಾಮ್‌ ಠಾಕೂರ್   

ಶಿಮ್ಲಾ: ‘ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ಏನಾದರೂ ಆಗಬಹುದು. ಹೀಗಾಗಿ, ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜೈರಾಮ್‌ ಠಾಕೂರ್‌ ಭಾನುವಾರ ಹೇಳಿದ್ದಾರೆ.

ಈ ಮೂಲಕ, ಅವರು ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬದಲಾಗುವ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲಕರವಾಗಿಲ್ಲ. ಸಚಿವರೇ ಸಂಪುಟದಿಂದ ಹೊರಗೆ ಹೋಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ’ ಎಂದು ಠಾಕೂರ್‌ ಹೇಳಿದ್ದಾರೆ.

ADVERTISEMENT

ಶನಿವಾರ ಸಂಪುಟ ನಡೆಯುತ್ತಿದ್ದಾಗಿನ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೈರಾಮ್‌ ಠಾಕೂರ್‌ ಈ ಹೇಳಿಕೆ ನೀಡಿದ್ದಾರೆ.

6 ಬಂಡಾಯ ಶಾಸಕರು ಸೇರಿದಂತೆ 9 ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿರುವ ಕಾರಣ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.
–ಜೈರಾಮ್‌ ಠಾಕೂರ್‌, ವಿಧಾನಸಭೆ ವಿರೋಧ ಪಕ್ಷ ನಾಯಕ

ಸಭೆ ನಡೆಯುತ್ತಿದ್ದಾಗಲೇ ಕಂದಾಯ ಸಚಿವ ಜಗತ್‌ ನೇಗಿ ಹೊರ ನಡೆದಿದ್ದರು. ಸಭೆ ವೇಳೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ರೋಹಿತ್‌ ಠಾಕೂರ್‌ ಸಭೆಯಿಂದ ಹೊರ ಹೋಗಿದ್ದರು.

‘ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದ ಸಭೆಯಿಂದ ಅರ್ಧಕ್ಕೆ ಹೊರಟಿದ್ದಾಗಿ’ ಈ ಇಬ್ಬರು ಸಚಿವರು ನಂತರ ಹೇಳಿದ್ದರು. ಈ ಪೈಕಿ, ರೋಹಿತ್‌ ಠಾಕೂರ್ ಅವರು ಉಪಮುಖ್ಯಮಂತ್ರಿ ಮುಕೇಶ್‌ ಅಗ್ನಿಹೋತ್ರಿ ಮನವೊಲಿಸಿದ್ದರಿಂದಾಗಿ ಸಂಪುಟ ಸಭೆಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.