
ಜೈಪುರ: ಪುರಾಣದಲ್ಲಿ ಮಹಿಳೆಯರು, ಜೆನ್ ಝೀ, ಬ್ರಿಟಿಷ್ ಸಾಮ್ರಾಜ್ಯದ ವಸಾಹಾತುಶಾಹಿ ಸೃಷ್ಟಿಸಿದ ಹಿಂಸೆ... ಮುಂತಾದ ಹಲವು ಗಂಭೀರ ವಿಚಾರಗಳ ಚಿಂತನ ಮಂಥನದೊಂದಿಗೆ ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 19ನೇ ಆವೃತ್ತಿಯು ಸೋಮವಾರ ಸಂಪನ್ನಗೊಂಡಿತು.
ವಾರಾಂತ್ಯದ ಎರಡು ದಿನ ಉತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಕ್ಲಾರ್ಕ್ಸ್ ಆಮೆರ್ ಹೋಟೆಲ್ ಆವರಣದಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿತ್ತು.
ಉತ್ಸವದಲ್ಲಿ ನಡೆದ ವಿವಿಧ ಘೋಷ್ಠಿಗಳಲ್ಲಿ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಯುದ್ಧ, ಹಿಂಸಾಚಾರಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದವು.
ಗಾಜಾಗೆ ಸಂಬಂಧಿಸಿದ ಗೋಷ್ಠಿಯಲ್ಲಿ ಅವಿ ಶ್ಲೈಮ್, ನೊಅ ಅವಿಶಗ್ಶನಲ್, ರಮೀಟಾ ನವೈ ಮತ್ತು ಲೀನಾ ಖಾಲಿಫ್ ಭಾಗವಹಿಸಿದ್ದರು. ಇಸ್ರೇಲ್ ಗಾಜಾದಲ್ಲಿ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದ ಅವರು, ಅಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಅನುಭವಗಳ ಮೂಲಕ ವಿವರಿಸಿದ್ದು ಕೇಳುಗರ ಮನ ಮಿಡಿಯಿತು. ಗೋಷ್ಠಿ ಮುಗಿದಾಗ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.
ಸಾಹಿತ್ಯ ಕೃತಿಯ ಬಗ್ಗೆ ಚರ್ಚೆ, ಅವುಗಳ ಬಿಡುಗಡೆ ನಡುವೆ, ಪುರಾತತ್ವ ಆಧಾರಗಳು, ಚಿತ್ರಗಳನ್ನು ಪರದೆ ಮೇಲೆ ಪ್ರದರ್ಶಿಸಿ ಅವುಗಳ ಮೂಲಕ ಬುದ್ಧನ ಕಾಲಘಟ್ಡ, ಆಗಿನ ಆಗಿನ ಆಚರಣೆಗಳ ಬಗ್ಗೆ ಸಂಶೋಧಕರಾದ ರಾಬರ್ಟ್ ಎ ಕೊನಿಂಗ್ ಹ್ಯಾಮ್, ನಮನ್ ಅಹುಜಾ, ಸೊನ್ಯಾ ರಿಮೆಸ್ ವಿವರಿಸಿದ್ದು ಈ ಬಾರಿಯ ಉತ್ಸವದ ವಿಶೇಷ.
ಪ್ರತಿದಿನ ಸಂಗೀತ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭವಾಗುತ್ತಿತ್ತು. ಐಶ್ವರ್ಯಾ ವಿದ್ಯಾ ರಘುನಾಥ್, ರಿತ್ವಿಕಾ ರಾಜಾ ಅವರಂಥ ಶಾಸ್ತ್ರೀಯ ಸಂಗೀತಗಾರರ ಜತೆಗೆ ಭನ್ವಾರಿ ದೇವಿ ಅವರಂಥ ಜನಪದ ಗಾಯಕರಿಗೂ ವೇದಿಕೆ ಕಲ್ಪಿಸಲಾಗಿತ್ತು.
ಸಾಹಿತ್ಯಾಸಕ್ತರ ಮೆಚ್ಚುಗೆ: ಜೆಎಲ್ಎಫ್ನ ಸ್ವರೂಪ, ಆಶಯ ಮತ್ತು ವ್ಯವಸ್ಥೆ ಈ ಬಾರಿಯೂ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
‘ಜೆಎಲ್ಎಫ್ನವರು ಭಾರತವಷ್ಟೇ ಅಲ್ಲದೆ ಅಮೆರಿಕದ ಹಲವು ರಾಜ್ಯಗಳು, ಸ್ಪೇನ್, ಲಂಡನ್, ಚೀನಾ ಹೀಗೆ ವರ್ಷಪೂರ್ತಿ ಒಂದಿಲ್ಲೊಂದು ಕಡೆ ಸಾಹಿತ್ಯ, ಕಲೆ, ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಇವರ ಪಾಲಿಗೆ ಇದು ಆಸಕ್ತಿ, ಅಭಿರುಚಿ, ವ್ಯಾಪಾರ ಎಲ್ಲವೂ ಆಗಿದೆ’ ಎನ್ನುವುದು ದೆಹಲಿಯಿಂದ ಬಂದಿದ್ದ ಗುರುಚರಣ್ ಅಭಿಪ್ರಾಯ.
ಈ ಬಾರಿಯ ಉತ್ಸವದಲ್ಲೂ ವಿದೇಶಿಯರು ಗಮನಾರ್ಹ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೆಸರಿನಲ್ಲಿ ಸಾಹಿತ್ಯ ಉತ್ಸವ ಎಂದಿದ್ದರೂ, ಅಲ್ಲಿ ಸಂಗೀತ, ಕಲೆ, ಊಟ ಎಲ್ಲವೂ ಇತ್ತು. ಗೋಷ್ಠಿಗಳಲ್ಲಿ ಗಹನವಾದ ಚರ್ಚೆ ನಡೆದಂತೆ ಹೊರಗಡೆ ಪುಸ್ತಕಗಳ ವ್ಯಾಪಾರ ಜೋರಾಗಿತ್ತು.
‘ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಕಟ್ಟುಬೀಳದೇ ನಿರ್ವಹಿಸುವುದು ಮತ್ತು ಸಾಹಿತ್ಯ ಉತ್ಸವಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಿರುವುದು ಜೆಎಲ್ಎಫ್ನ ಯಶಸ್ಸಿಗೆ ಕಾರಣ’ ಎಂಬುದು ಪುಣೆಯಿಂದ ಬಂದಿದ್ದ ಅಮಿತ್ ಅವರ ವಿಶ್ಲೇಷಣೆ.
ಲೇಖಕರಾದ ಅನುರಾಧ ರಾಯ್ ಹಿಮಾಲಯದ ರಾಣಿಕೇತ್ನಲ್ಲಿ ಮತ್ತು ಸ್ಟೀಫನ್ ಆಲ್ಟರ್ ಅವರು ಮಸ್ಸೂರಿಯಲ್ಲಿ ನೆಲಸಿ ಕೃತಿ ರಚನೆ ಮಾಡಿದ ಅನುಭವ ಹಂಚಿಕೊಂಡದ್ದು ಆಸಕ್ತಿಕರವಾಗಿತ್ತು. ‘ಹಿಮಾಲಯದಲ್ಲಿ ಕುಳಿತು ಕಾದಂಬರಿ ಬರೆಯುವುದು ಅಷ್ಟೇನೂ ಸುಖದ ಅನುಭವವಲ್ಲ. ಅಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಬಡತನ ಇದೆ’ ಎಂದು ಅನುರಾಧ ರಾಯ್ ವಿವರಿಸಿದರು. ಹಿಮಾಲಯದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ನಾಯಿಗಳಿವೆ ಎಂದು ಅವರು ಹೇಳಿದಾಗ ಗೋಷ್ಠಿ ನಗೆಗಡಲಲ್ಲಿ ತೇಲಿತು.
ಬೆಳಗಾವಿಯವರಾಗಿದ್ದು ಇಂದೋರ್ ಐಐಟಿಯಲ್ಲಿ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡುತ್ತಿರುವ ಇಂದ್ರಜಾ ಬಹದ್ದೂರ್ ದೇಸಾಯಿ ಉತ್ಸವದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಹೀಗೆ ಜೈಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 300 ಸ್ವಯಂಸೇವಕರು ಈ ಬಾರಿ ಇದ್ದರು. ಈ ಪೈಕಿ ಬಹುತೇಕರು ವಿದ್ಯಾರ್ಥಿಗಳಾಗಿದ್ದು ಉತ್ಸವಕ್ಕೆ ಬರುವ ಖ್ಯಾತನಾಮರನ್ನು ನೋಡಲು ಅವರ ಮಾತು ಕೇಳಲು ಉತ್ಸವದ ಅನುಭವ ಪಡೆಯಲು ಬರುತ್ತಾರೆ.
ಲಂಡನ್ನಲ್ಲಿ ನಡೆಯುವ ಜೆಎಲ್ಎಫ್ಗಳು ಹೋಗುತ್ತಿದ್ದ ನಾನು ಗಂಡನೊಂದಿಗೆ ಈ ಬಾರಿ ಜೈಪುರಕ್ಕೆ ಬಂದಿದ್ದೇನೆ. ಗೋಷ್ಠಿಗಳಲ್ಲಿ ಭಾಗವಹಿಸುವುದಕ್ಕಿಂತ ನಮಗೆ ಜನರನ್ನು ನೋಡುವುದು ಓಡಾಡುವುದು ಊಟ ಮಾಡುವುದು ಇಷ್ಟ.–ಎಮ್ಮಿ, ಲಂಡನ್ನಿಂದ ಉತ್ಸವಕ್ಕೆ ಬಂದಿದ್ದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.