ADVERTISEMENT

ಯತಾಸ್ಥಿತಿ ಬದಲಿಸುವುದನ್ನು ವಿರೊಧಿಸುತ್ತೇವೆ: ಜಪಾನ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 19:30 IST
Last Updated 3 ಜುಲೈ 2020, 19:30 IST
ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನೆಯ ಡೇರೆಗಳು ಮತ್ತು ವಾಹನಗಳು –ಎಎಫ್‌ಪಿ ಚಿತ್ರ
ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನೆಯ ಡೇರೆಗಳು ಮತ್ತು ವಾಹನಗಳು –ಎಎಫ್‌ಪಿ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿ ಚೀನಾ ಏಕಪ‍ಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸುವುದನ್ನು ಜಪಾನ್‌ನ ಭಾರತದ ರಾಯಭಾರಿ ಸತೋಷಿ ಸುಜುಕಿ ಅವರು ವಿರೋಧಿಸಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅವರು ನವದೆಹಲಿಯಲ್ಲಿ ಶುಕ್ರವಾರ ಸುಜುಕಿ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಸುಜುಕಿ ಅವರು ಟ್ವೀಟ್‌ ಮಾಡಿ, ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಶೃಂಗ್ಲಾ ಅವರ ಜತೆಗಿನ ಮಾತುಕತೆ ಅರ್ಥಪೂರ್ಣವಾಗಿತ್ತು. ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಬಗ್ಗೆ ಅವರು ಸ್ಪ‍ಷ್ಟವಾಗಿ ವಿವರಿಸಿದರು. ಇದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ಭಾರತ ಸರ್ಕಾರದ ನಿಲುವನ್ನೂ ಅವರು ಸ್ಪಷ್ಟಪಡಿಸಿದರು.ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪ್ರಯತ್ನಗಳನ್ನು ಜಪಾನ್‌ ವಿರೋಧಿಸುತ್ತದೆ’ ಎಂದು ಸತೋಷಿ ಸುಜುಕಿ ಟ್ವೀಟ್ ಮಾಡಿದ್ದಾರೆ.

ADVERTISEMENT

ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅವರು ಭಾರತದಲ್ಲಿನ ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಜರ್ಮನಿ ರಾಯಭಾರ ಕಚೇರಿಗಳಿಗೂ ಭೇಟಿ ನೀಡಿದ್ದಾರೆ. ಅಲ್ಲಿ ರಾಯಭಾರಿಗಳ ಜತೆ ಮಾತುಕತೆ ನಡೆಸಿ, ಎಲ್‌ಎಸಿಯಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಅಮೆರಿಕಕ್ಕೆ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅವರು, ಅಮೆರಿಕದ ವಿದೇಶಾಂಗ ವ್ಯವಹಾರಗಳ ಉಪಕಾರ್ಯದರ್ಶಿ ಸ್ಟೀಫನ್ ಬೀಗನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಭಾರತ–ಚೀನಾ ಗಡಿವಿವಾದದಲ್ಲಿ ಮಧ್ಯಸ್ಥಿಕೆ ವಹಿಸುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಹೇಳಿದ್ದರು. ಭಾರತವು ಅದನ್ನು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.