ADVERTISEMENT

ನೊಯಿಡಾ: ಜಾರ್ಖಂಡ್‌ನ ಮೂವರು ವಲಸೆ ಕಾರ್ಮಿಕರ ವಿಮಾನ ದರ ಭರಿಸಿದ 12 ವರ್ಷದ ಬಾಲಕಿ!

ಮುಖ್ಯಮಂತ್ರಿ ಹೇಮಂತ್ ಸೊರೇನ್ ಮೆಚ್ಚುಗೆ

ಪಿಟಿಐ
Published 1 ಜೂನ್ 2020, 14:40 IST
Last Updated 1 ಜೂನ್ 2020, 14:40 IST
ನಿಹಾರಿಕಾ ದ್ವಿವೇದಿ –ಎಎನ್‌ಐ ಚಿತ್ರ
ನಿಹಾರಿಕಾ ದ್ವಿವೇದಿ –ಎಎನ್‌ಐ ಚಿತ್ರ   

ರಾಂಚಿ: ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣದ ದರ ಭರಿಸುವ ಮೂಲಕ ನೊಯಿಡಾದ 12 ವರ್ಷದ ಬಾಲಕಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

8ನೇ ತರಗತಿ ಓದುತ್ತಿರುವ ನಿಹಾರಿಕಾ ದ್ವಿವೇದಿ ತನ್ನ ಉಳಿತಾಯದಿಂದ ಜಾರ್ಖಂಡ್‌ನ ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣಕ್ಕೆ ₹48 ಸಾವಿರ ನೀಡಿ ಉದಾರತೆ ಮೆರೆದಿದ್ದಾಳೆ. ಈ ಮೂವರು ಕಾರ್ಮಿಕರಲ್ಲಿ ಒಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಅನ್ಯರ ಕಷ್ಟಕ್ಕೆ ಸ್ಪಂದಿಸಿದ ಬಾಲಕಿಯ ನಡೆಯನ್ನು ಹೇಮಂತ್‌ ಸೊರೆನ್‌ ಸೋಮವಾರ ಶ್ಲಾಘಿಸಿದ್ದಾರೆ. ‘ನಾನು ಆ ಬಾಲಕಿಗೆ ಆಭಾರಿಯಾಗಿದ್ದೇನೆ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಆಕೆಯಲ್ಲಿರುವುದು ಶ್ಲಾಘನೀಯ. ಆಕೆಯ ಭವಿಷ್ಯ ಉಜ್ವಲವಾಗಲಿ’ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ.

ADVERTISEMENT

‘ಸಮಾಜ ನಮಗೆ ಸಾಕಷ್ಟು ನೀಡಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಸಮಾಜ ನಮಗೆ ನೀಡಿದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ನಿಹಾರಿಕ ಅಭಿಪ್ರಾಯಪಟ್ಟಿದ್ದಾಳೆ.

ತಮ್ಮ ಊರುಗಳನ್ನು ಸೇರಲು ಸಾವಿರಾರು ಕಿಲೋ ಮೀಟರ್‌ಗಟ್ಟಲೆ ನಡೆದೇ ಹೋಗುತ್ತಿರುವ ವಲಸೆ ಕಾರ್ಮಿಕರ ವಿಚಾರ ತಿಳಿದ ನಿಹಾರಿಕಾ ಅಂತಹವರಿಗೆ ನೆರವಾಗಬೇಕೆಂದು ನಿರ್ಧರಿಸಿದ್ದಾಳೆ. ಬಳಿಕ ಯಾರಾದರೂ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ಕಷ್ಟ ಅನುಭವಿಸುತ್ತಿದ್ದಾರೆಯೇ ಎಂಬುದನ್ನು ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಆಗ ಈ ಮೂವರು ಜಾರ್ಖಂಡ್‌ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ದೊರೆತಿದೆ. ಬಳಿಕ ಆಕೆ ಅವರ ಕಷ್ಟಕ್ಕೆ ಸ್ಪಂದಿಸಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.