ಲಖನೌ: ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ‘ಜಂಗಲ್ ರಾಜ್’ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬುಲಂದ್ಶಹರ್ನಲ್ಲಿ ವಕೀಲ ಧರ್ಮೇಂದ್ರ ಚೌಧರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ್ದಾರೆ. ಚೌಧರಿ ಅವರ ಶವ ಶುಕ್ರವಾರ ಪತ್ತೆಯಾಗಿತ್ತು.
‘ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪರಾಧ ಮತ್ತು ಕೊರೊನಾ ನಿಯಂತ್ರಣದಲ್ಲಿ ಇಲ್ಲ. ಶ್ರೀ ಧರ್ಮೇಂದ್ರ ಚೌಧರಿ ಅವರನ್ನು ಬುಲಂದ್ಶಹರ್ನಲ್ಲಿ ಎಂಟು ದಿನಗಳ ಹಿಂದೆ ಅಪಹರಿಸಲಾಗಿತ್ತು. ಅವರ ಶವ ನಿನ್ನೆ ಪತ್ತೆಯಾಗಿದೆ. ಕಾನ್ಪುರ, ಗೋರಖ್ಪುರ ಮತ್ತು ಬುಲಂದ್ಶಹರ್ನಲ್ಲಿ ನಡೆಯುವ ಪ್ರತಿ ಪ್ರಕರಣದ ವಿಚಾರದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಜಡತೆಯಿಂದ ಕೂಡಿದೆ. ಜಂಗಲ್ ರಾಜ್ನ ಗುರುತುಗಳು ಕಾಣುತ್ತವೆ. ಈ ಸರ್ಕಾರ ಇನ್ನೂ ಎಷ್ಟುದಿನಗಳ ಕಾಲ ನಿದ್ರೆ ಮಾಡುತ್ತದೆ ಎಂದು ಅಚ್ಚರಿಗೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಜುಲೈ 25ರಂದು ನಾಪತ್ತೆಯಾಗಿದ್ದ ಬುಲಂದ್ಶಹರ್ ವಕೀಲರ ಮೃತದೇಹ ಜುಲೈ 31ರಂದು ನಗರದಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಪ್ರಿಯಾಂಕಾ ಅವರು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.