ADVERTISEMENT

ಕನ್ಹಯ್ಯ ಮತ್ತೊಬ್ಬ ಸಿಧು, ಅವರು ಕಾಂಗ್ರೆಸ್ ಅನ್ನು ನಾಶ ಮಾಡುತ್ತಾರೆ: ಆರ್‌ಜೆಡಿ

ಪಿಟಿಐ
Published 1 ಅಕ್ಟೋಬರ್ 2021, 13:44 IST
Last Updated 1 ಅಕ್ಟೋಬರ್ 2021, 13:44 IST
ಕನ್ಹಯ್ಯ ಕುಮಾರ್: ಪಿಟಿಐ ಚಿತ್ರ
ಕನ್ಹಯ್ಯ ಕುಮಾರ್: ಪಿಟಿಐ ಚಿತ್ರ   

ಮುಜಾಫರ್‌ಪುರ(ಬಿಹಾರ): ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ‘ಮತ್ತೊಬ್ಬ ನವಜೋತ್ ಸಿಂಗ್ ಸಿಧು’ ಇದ್ದಂತೆ, ಅವರು ಕಾಂಗ್ರೆಸ್ ಪಕ್ಷವನ್ನು ನಾಶಪಡಿಸುತ್ತಾರೆ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿ ಗೇಲಿ ಮಾಡಿದೆ.

ಕಾಂಗ್ರೆಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯ ಮಾಡಿರುವ ಆರ್‌ಜೆಡಿಯ ಹಿರಿಯ ನಾಯಕ ಶಿವಾನಂದ್ ತಿವಾರಿ ಅವರು, ಕನ್ಹಯ್ಯ ಕುಮಾರ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪರಿವರ್ತನೆ ಆಗುವುದಿಲ್ಲ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷವು ದೊಡ್ಡ ಹಡಗು, ಅದನ್ನು ಉಳಿಸಬೇಕಿದೆ’ಎಂಬ ಕನ್ಹಯ್ಯ ಹೇಳಿಕೆಯನ್ನು ಉಲ್ಲೇಖಿಸಿದ ತಿವಾರಿ, ‘ಅವರು ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿದ್ದಾರೆ’ ಎಂದು ಕುಟುಕಿದ್ದಾರೆ.

ADVERTISEMENT

‘ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವರು ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಮತ್ತು ಅದಕ್ಕೆ ಭವಿಷ್ಯವಿಲ್ಲ’ಎಂದು ಆರ್‌ಜೆಡಿ ನಾಯಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತೇಜಸ್ವಿ ಯಾದವ್ ನೇತೃತ್ವದ ಪಕ್ಷವನ್ನು ಸಂಪರ್ಕಿಸದೆ ಕನ್ಹಯ್ಯ ಕುಮಾರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಕ್ಕೆ ಆರ್‌ಜೆಡಿ ಅತೃಪ್ತಿ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷವು, ಆರ್‌ಜೆಡಿ ನೇತೃತ್ವದ ವಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್‌ನ ಭಾಗವಾಗಿದೆ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ ಎನ್‌ಡಿಎ ವಿರುದ್ಧ ಹೋರಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.