ಕೆ.ಪಿ ಮೋಹನನ್
ಕಣ್ಣೂರು (ಕೇರಳ): ಮಾಜಿ ಸಚಿವ ಹಾಗೂ ಕೂತುಪರಂಬ ಕ್ಷೇತ್ರದ ಶಾಸಕ ಕೆ.ಪಿ ಮೋಹನನ್ ಅವರ ಮೇಲೆ ಕಣ್ಣೂರಿನ ಕರಿಯಾಡ್ನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪದ ಮೇಲೆ 10 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗನವಾಡಿಯೊಂದರ ಉದ್ಘಾಟನೆಗೆ ಪೆರಿಂಗತ್ತೂರಿನ ಕರಿಯಾಡ್ಗೆ ಗುರುವಾರ ಆಗಮಿಸಿದ್ದ ಆಡಳಿತರೂಢ ಎಲ್ಡಿಎಫ್ನ ಶಾಸಕ ಮೋಹನನ್ ಅವರ ಮೇಲೆ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದತ್ತಿ ಟ್ರಸ್ಟ್ ಒಂದರಿಂದ ನಡೆಸಲ್ಪಡುತ್ತಿರುವ ಡಯಾಲಿಸಿಸ್ ಕೇಂದ್ರವೊಂದರ ಸಮೀಪ ಅಂಗನವಾಡಿಯ ತ್ಯಾಜ್ಯವನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರೇ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 15 ಮಂದಿ ಸೇರಿ ಶಾಸಕರನ್ನು ತಡೆದು, ಸ್ಥಳದಲ್ಲಿ ಸಂಚಾರಕ್ಕೆ ತೊಡಕುಂಟು ಮಾಡಿ, ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕಾರಿನಿಂದ ಇಳಿದು ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗುವ ವೇಳೆ, ಗುಂಪು ಅವರನ್ನು ಮತ್ತೆ ತಡೆದಿದ್ದು, ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದಾದ ಬಳಿಕವೂ ಕಾರ್ಯಕ್ರಮದಲ್ಲಿ ಶಾಸಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಸ್ಥಳಕ್ಕೆ ತೆರಳಿದ ಪೊಲೀಸರು ಲಿಖಿತ ದೂರು ನೀಡುವಂತೆ ವಿನಂತಿಸಿದ್ದಾರೆ. ಆದರೆ ಅವರು ನಿರಕರಿಸಿದ್ದಾರೆ.
ಶಾಸಕರು ದೂರು ನೀಡಲು ನಿರಾಕರಿಸಿದ್ದರಿಂದ, ನಾವೇ ದೂರು ದಾಖಲಿಸಿಕೊಂಡು, 10 ಮಂದಿ ಮೇಲೆ ಪ್ರಕರಣ ಹಾಕಿದ್ದೇವೆ. ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆಯ ಭಾಗವಾಗಿ ಮೋಹನನ್ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.