ADVERTISEMENT

Red Fort blast: ಲೇಡಿ ಡಾಕ್ಟರ್‌ ಸಂಪರ್ಕ; ಕಾನ್ಪುರದ ಹೃದ್ರೋಗ ತಜ್ಞ ATS ವಶಕ್ಕೆ

ಪಿಟಿಐ
Published 13 ನವೆಂಬರ್ 2025, 9:39 IST
Last Updated 13 ನವೆಂಬರ್ 2025, 9:39 IST
<div class="paragraphs"><p>ಉತ್ತರ ಪ್ರದೇಶದ ಕಾನ್ಪುರದ&nbsp;ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸಿದರು</p></div>

ಉತ್ತರ ಪ್ರದೇಶದ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸಿದರು

   

ಕಾನ್ಪುರ: ದೆಹಲಿಯ ಕೆಂಪುಕೋಟೆ ಬಳಿ ಕಳೆದ ಸೋಮವಾರ ಸಂಜೆ ನಡೆದ ಕಾರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಹೃದ್ರೋಗ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಗುರುವಾರ ವಶಕ್ಕೆ ಪಡೆದಿದೆ.

ಡಾ. ಮೊಹಮ್ಮದ್‌ ಆರಿಫ್ (32) ಬಂಧಿತ ವ್ಯಕ್ತಿ. ಇವರು ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ (GSVM) ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಹೃದ್ರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಇವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ADVERTISEMENT

ಡಾ. ಆರಿಫ್‌ಗೆ ಉಳಿದುಕೊಂಡಿದ್ದ ನಜೀರಾಬಾದ್‌ನ ಅಶೋಕ ನಗರದಲ್ಲಿರುವ ಬಾಡಿಗೆ ಮನೆಯಲ್ಲೂ ಎಟಿಎಸ್ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 

ದೆಹಲಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ. ಆರಿಫ್ ಸಂಪರ್ಕ ಹೊಂದಿದ್ದ ಲೇಡಿ ಡಾಕ್ಟರ್‌

GSVM ಕಾಲೇಜಿನ ಪ್ರಾಧ್ಯಾಪಕಿ ಡಾ. ಶಾಹೀನ್ ಸೈಯದ್‌ ಅವರನ್ನು ವಶಕ್ಕೆ ಪಡೆದಿರು ಎಟಿಎಸ್‌ ತೀವ್ರ ವಿಚಾರಣೆ ನಡೆಸಿತ್ತು. ಅವರು ಉಲ್ಲೇಖಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಡಾ. ಆರಿಫ್‌ ಅವರನ್ನು ನಂತರ ವಶಕ್ಕೆ ಪಡೆಯಲಾಯಿತು. ಡಾ. ಶಾಹೀನ್‌ ಮತ್ತವರ ಸೋದರ ಡಾ. ಪರ್ವೇಜ್‌ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಸ್ಫೋಟದ ಒಂದು ದಿನ ಮೊದಲು ಡಾ. ಶಾಹೀನ್‌ ಜತೆ ಡಾ. ಆರಿಫ್‌ ಫೋನ್ ಸಂಭಾಷಣೆ ನಡೆಸಿದ್ದರು. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೂ ಭೇಟಿ ನೀಡಿದ್ದರು. ಅಧಿಕಾರಿಗಳು ಇವರ ಮನೆಗೆ ಭೇಟಿ ನೀಡಿದಾಗ, ಫೋನ್‌ನಲ್ಲಿದ್ದ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದರು. ಆ ಹೊತ್ತಿಗೆ ಅವುಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಾಫ್ಟ್‌ ಮೂಲಕ ಇ–ಮೇಲ್ ಸಂಭಾಷಣೆಯ ತಂತ್ರ

ಕರೆಗಳ ಮಾಹಿತಿಯನ್ನು ವಿಶ್ಲೇಷಿಸಿರುವ ಪೊಲೀಸರು, ಪ್ರಾಥಮಿಕ ವರದಿಗಳ ಪ್ರಕಾರ ಈ ಕೃತ್ಯದ ಮಾಸ್ಟರ್‌ಮೈಂಡ್‌ ಜತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಇವರೆಲ್ಲರೂ ಒಂದೇ ಇಮೇಲ್‌ ಐಡಿಯನ್ನು ಬಳಸಿ, ಅದರಲ್ಲಿ ‘ಡ್ರಾಫ್ಟ್‌’ ಮೋಡ್‌ನಲ್ಲಿ ತಮ್ಮ ಸಂಭಾಷಣೆಗಳನ್ನು ‘ಸೇವ್‌’ ಮಾಡುತ್ತಿದ್ದರು. ಇಮೇಲ್‌ ಕಳುಹಿಸುವುದರಿಂದ ತಮ್ಮ ಷಡ್ಯಂತ್ರ ಬಯಲಾಗುವ ಭೀತಿಯಲ್ಲಿ ಭಯೋತ್ಪಾದಕ ಗುಂಪುಗಳು ಈ ತಂತ್ರವನ್ನು ಅನುಸರಿಸುತ್ತವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಡಾ. ಆರಿಫ್‌ ಬಂಧನದಿಂದ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೂರು ತಿಂಗಳ ಹಿಂದೆ ಇಲ್ಲಿನ ಹೃದ್ರೋಗ ವಿಭಾಗಕ್ಕೆ ಆರಿಫ್‌ ದಾಖಲಾಗಿದ್ದರು ಎಂದೆನ್ನಲಾಗಿದೆ.

ಘಟನೆಯನ್ನು ಖಚಿತಪಡಿಸಿದ ಕಾಲೇಜಿನ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ. ಜ್ಞಾನೇಂದ್ರ, ‘ಅಖಿಲ ಭಾರತ ಮಟ್ಟದ ಕೌನ್ಸೆಲಿಂಗ್ ಮೂಲಕ ಡಾ. ಆರಿಫ್‌ ಈ ವಿಭಾಗಕ್ಕೆ ದಾಖಲಾಗಿದ್ದರು. ಬುಧವಾರ ವಿಭಾಗಕ್ಕೆ ಬಂದಿದ್ದ ಇವರು ನಂತರ ತಮ್ಮ ವಸತಿಗೆ ತೆರಳಿದ್ದರು. ಸಂಜೆ 7ರ ಹೊತ್ತಿಗೆ ಇವರ ಬಂಧನ ಸುದ್ದಿ ತಿಳಿಯಿತು. ಕ್ಯಾಂಪಸ್‌ನಲ್ಲಿದ್ದ ದಿನಗಳಲ್ಲಿ ತಮ್ಮ ಪಾಡಿಗೆ ತಾವು ಇರುತ್ತಿದ್ದರು. ತಮ್ಮ ಕೆಲಸವನ್ನು ಸದ್ದಿಲ್ಲದೆ ಮುಗಿಸಿ ತೆರಳುತ್ತಿದ್ದರು’ ಎಂದಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ಹೃದ್ರೋಗ ವಿಭಾಗದ ಮೊದಲ, ಎರಡನೇ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದಿದ್ದಾರೆ.

ಬಂದಿದ್ದ ಎಟಿಎಸ್ ಅಧಿಕಾರಿಗಳ ಬಳಿ ಮೊದಲೇ ಕೀಲಿ ಇತ್ತು

ಆರಿಫ್‌ ಇದ್ದ ಬಾಡಿಗೆ ಮನೆಯ ಮಾಲೀಕ ಕನ್ಹಯ್ಯ ಲಾಲ್ ಪ್ರತಿಕ್ರಿಯಿಸಿ, ‘ಕಳೆದ ಒಂದು ತಿಂಗಳಿಂದ ಅವರು ಈ ಮನೆಯಲ್ಲಿದ್ದರು. ಇವರೊಂದಿಗೆ ದ್ವಿತೀಯ ವರ್ಷದ ಡಾ. ಅಭಿಷೇಕ್ ಎಂಬುವವರೂ ಇದ್ದರು. ಸಂಜೆ 7.30ರ ಸುಮಾರಿಗೆ ನಾಲ್ಕು ಜನರ ತಂಡ ಮನೆಗೆ ಬಂದಿತು. ಅವರ ಬಳಿ ಅದಾಗಾಗಲೇ ಮನೆಯ ಬೀಗ ಇತ್ತು. ಇಡೀ ಮನೆಯನ್ನೇ ಶೋಧಿಸಿದರು. ಮತ್ತೆ ಬೀಗ ಹಾಕಿ ಹೊರಟರು’ ಎಂದು ಮಾಹಿತಿ ನೀಡಿದ್ದಾರೆ.

‘ಮನೆ ಬಾಡಿಗೆ ಪಡೆಯುವಾಗ ಅವರು ಗುರುತಿನ ಚೀಟಿ ನೀಡಿದ್ದರು. ಅನುಮಾನ ಬರುವಂತೆ ಎಂದೂ ಅವರು ನಡೆದುಕೊಂಡಿಲ್ಲ. ಅಪರಿಚಿತರೂ ಬರುತ್ತಿರಲಿಲ್ಲ’ ಎಂದಿದ್ದಾರೆ.

ಕಾನ್ಪುರ ಪೊಲೀಸ್ ಆಯುಕ್ತ ರಘುವೀರ್ ಲಾಲ್‌ ಮಾಹಿತಿ ನೀಡಿ, ‘ಡಾ. ಆರಿಫ್‌ ಎಂಬಾತನನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಇದೆ. ಅದರ ವರದಿಯನ್ನು ಪರಿಶೀಲಿಸಲು ತಂಡವನ್ನು ಕಳುಹಿಸಲಾಗಿದೆ. ಅದು ಖಚಿತವಾದ ನಂತರ ಪ್ರತಿಕ್ರಿಯಿಸಲಾಗುವುದು’ ಎಂದಿದ್ದಾರೆ.

ಇದರ ನಡುವೆ ಡಾ. ಶಾಹೀನ್‌ ಜತೆ ಸಂಪರ್ಕ ಇರಬಹುದಾದ ವ್ಯಕ್ತಿಗಳಿಗೆ ಎಟಿಎಸ್ ಅಧಿಕಾರಿಗಳು ಕಾನ್ಪುರದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ. ಇದರಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.