
ನವದೆಹಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ₹1,950.80 ಕೋಟಿ ಪರಿಹಾರವನ್ನು 2025–26ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಅಡಿ ಮುಂಗಡವಾಗಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅನುಮೋದನೆ ನೀಡಿದ್ದಾರೆ. ಪರಿಹಾರದ ಎರಡನೇ ಕಂತಿನ ಮೊತ್ತ ಇದಾಗಿದೆ.
ಈ ವರ್ಷದ ನೈರುತ್ಯ ಮುಂಗಾರಿನಿಂದ ತೀವ್ರ ಹಾನಿಗೊಳಗಾದ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ ₹384.40 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ ₹1,566.40 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ.
‘ಪ್ರವಾಹ, ಭೂಕುಸಿತ ಹಾಗೂ ಮೇಘಸ್ಫೋಟಕ್ಕೆ ಒಳಗಾದ ರಾಜ್ಯಗಳಿಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಲಹೆಯಂತೆ ಕೇಂದ್ರ ಸರ್ಕಾರ ತನ್ನ ಬದ್ಧತೆ ವ್ಯಕ್ತಪಡಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಸ್ಡಿಆರ್ಎಫ್ನ ಅಡಿಯಲ್ಲಿ ಕೇಂದ್ರದ ಪಾಲಾದ ₹13,603.20 ಕೋಟಿಯನ್ನು 27 ರಾಜ್ಯಗಳಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ (ಎನ್ಡಿಆರ್ಎಫ್) ಅಡಿಯಲ್ಲಿ 15 ರಾಜ್ಯಗಳಿಗೆ ₹2,189.28 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರವು ಈ ವರ್ಷ ಬಿಡುಗಡೆ ಮಾಡಿದೆ
ಇದಲ್ಲದೇ, ಹೆಚ್ಚುವರಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಎಂಎಫ್)ನ ಅಡಿಯಲ್ಲಿ 21 ರಾಜ್ಯಗಳಿಗೆ ₹4,571.30 ಕೋಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಎಂಎಫ್) ಅಡಿಯಲ್ಲಿ 9 ರಾಜ್ಯಗಳಿಗೆ ₹372.09 ಕೋಟಿ ನೆರವು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.