
ಚಂಡಿಗಢ: ಕೇಂದ್ರ ಸರ್ಕಾರವು ಕರ್ತಾರ್ಪುರ ಕಾರಿಡಾರ್ ಮರಳಿ ಆರಂಭಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಿಂಗ್ ಅವರು ಬುಧವಾರ ಒತ್ತಾಯಿಸಿದ್ದಾರೆ.
ಗುರುನಾನಕ್ ಜಯಂತಿ ಪ್ರಯುಕ್ತ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ನಲ್ಲಿ ಅವರ ಪತ್ನಿ ಗುರುಪ್ರೀತ್ ಕೌರ್ ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿದರು. ಪಂಜಾಬ್ನ ಬೆಳವಣಿಗೆ, ಶಾಂತಿ ಹಾಗೂ ಭಾತೃತ್ವಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
‘ಪಾಕಿಸ್ತಾನದೊಂದಿಗೆ ಗುಜರಾತ್ ಮೂಲಕ ವ್ಯಾಪಾರ ಮಾಡಲಾಗುತ್ತಿದೆ, ಕ್ರಿಕೆಟ್ ಪಂದ್ಯಗಳನ್ನು ಆಡಲಾಗುತ್ತಿದೆ. ಭಕ್ತರು ಕೇವಲ 4–5 ತಾಸುಗಳು ಕರ್ತಾರ್ಪುರ ಸಾಹೀಬ್ನಲ್ಲಿ ಪ್ರಾರ್ಥನೆ ಸಲ್ಲಿಸಿ, ಮರಳಿ ಬರುತ್ತಾರೆ. ಹಾಗಾಗಿ, ಗೃಹ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯವು ಕರ್ತಾರ್ಪುರ ಕಾರಿಡಾರ್ ಮರಳಿ ಆರಂಭಿಸಬೇಕು. ಯಾರೊ ಪತ್ರ ಬರೆದ ನಂತರ ಆರಂಭಿಸುವುದರಲ್ಲಿ ಏನು ಉಪಯೋಗವಿದೆ’ ಎಂದು ಪ್ರಶ್ನಿಸಿದ್ದಾರೆ.
ಎರಡೂ ದೇಶಗಳ ಜನರು ಶಾಂತಿ ಬಯಸುತ್ತಾರೆ. ಅಟ್ಟಾರಿ-ವಾಘಾ ಮೂಲಕ ವ್ಯಾಪಾರ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರಕುತ್ತಿದೆ. ನಮ್ಮ ವ್ಯಾಪಾರವು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಕರ್ತಾರ್ಪುರ ಕಾರಿಡಾರ್ ಪಾಕಿಸ್ತಾನದಲ್ಲಿರುವ ಸಿಖ್ರ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗುರುದ್ವಾರ ದರ್ಬಾರ್ ಸಾಹೀಬ್ಗೆ ಸಂಪರ್ಕಿಸುತ್ತದೆ. ಪಹಲ್ಗಾಮ್ ದಾಳಿಯ ನಂತರ, ಭಾರತವು ಕರ್ತಾರ್ಪುರ ಕಾರಿಡಾರ್ ಮುಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.